About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, August 6, 2011

ದೇಶದ ಪ್ರಗತಿಗೊಂದು ಮೂಲಭೂತ ಸೂತ್ರ

ನಮಸ್ಕಾರ,

ದೇಶ ಪ್ರಗತಿಯ ದಿಕ್ಕಿನಲ್ಲಿ ಸಾಗಬೇಕಾದರೆ ಏನೇನು ಮಾಡಬೇಕು ಎನ್ನುವುದರ ಬಗ್ಗೆ ಹೆಚ್ಚು ಕಡಿಮೆ ನಾವೆಲ್ಲರೂ ಮಾತನಾಡುತ್ತೇವೆ. ಸಿಕ್ಕಸಿಕ್ಕಲ್ಲೆಲ್ಲಾ ಅವ್ಯವಸ್ಥೆ, ಭ್ರಷ್ಟ್ರಾಚಾರ, ಅಜ್ಞಾನ ತುಂಬಿರುವ ನಮ್ಮ ದೇಶದಲ್ಲಿ ಅನೇಕರ ಮೇಲೆ ಆಕ್ರೋಶ ಉಕ್ಕಿ ಬರುತ್ತದೆ, ಆದರೆ ಎಲ್ಲೆಲ್ಲಿ ಅಂತ ಹೋರಾಡಲು ಸಧ್ಯ? ಕೊನೆಗೆ ಜನಸಾಮಾನ್ಯರಾಗಿ ನಾವು ಈ ದೇಶದ ಸ್ಥಿತಿ ಅಮೂಲಾಗ್ರವಾಗಿ ಸರಿಹೋಗಬೇಕಾದರೆ ಇನ್ನೊಂದು ಕ್ರಾಂತಿಯೇ ಆಗಬೇಕು ಎಂದು ಹೇಳಿ ನಿಟ್ಟುಸಿರು ಬಿಡುತ್ತೇವೆ.

ನಿಜಕ್ಕೂ ಮೂಲಭೂತವಾಗಿ ಬದಲಾಗಬೇಕಾದದ್ದು ಏನು? ಯಾವುದೇ ಕ್ರಾಂತಿಯಿಂದ ರಾತ್ರೋರಾತ್ರಿ ಅಮೂಲಾಗ್ರ ಬದಲಾವಣೆ ಸಾಧ್ಯವೇ? ಹೀಗೆ ಆಲೋಚನೆ ಮಾಡುತ್ತಿರುವಾಗ ನನಗೆ ಒಂದು ಸೂತ್ರ ಸ್ಪಷ್ಟವಾಗಿ ಹೊಳೆಯಿತು. ಇದನ್ನು ಕಾರ್ಯರೂಪಕ್ಕೆ ತರುವುದು ಸುಲಭವಲ್ಲ, ಸಮಯವೂ ತೆಗೆದುಕೊಳ್ಳಬಹುದು, ಆದರೆ ಹೆಚ್ಚು ಹೆಚ್ಚು ಜನರು ದೇಶದ ಈ ಮೂಲಭೂತ ಆಧಾರಸ್ಥಂಭಗಳನ್ನು ಗುರುತಿಸಿ, ಗೌರವಿಸಿ ಅವುಗಳ ಉಳಿವಿಗೋಸ್ಕರ ಹೋರಾಡಿದರೆ ನಿಧಾನಕ್ಕೆ ನಮ್ಮ ದೇಶ ಪ್ರಗತಿಯ ಪಥದಲ್ಲಿ ನಡೆಯುವುದರಲ್ಲಿ ನನಗೆ ಸಂಶಯವಿಲ್ಲ.

‘ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂಬ ಒಂದು ಸಂಸ್ಕೃತೋಕ್ತಿಯಿದೆ. ಇದು ಬಹಳ ಮಾರ್ಮಿಕವಾದ ಮಾತೆಂದು ಪ್ರಾಜ್ಞರನೇಕರು ಒಪ್ಪುತ್ತಾರೆ (ಸಮಾಜ ಇದನ್ನು ಆಚಾರಕ್ಕೆ ತರುತ್ತದೆಯೋ ಇಲ್ಲವೋ, ಅದು ಬೇರೆ ಸಂಗತಿ). ಇದರರ್ಥ ಪುರುಷರು ಏನೂ ಉಪಯೋಗಕ್ಕಿಲ್ಲದವರು ಎಂದೇ? ಖಂಡಿತಾ ಅಲ್ಲ. ಆದರೆ ನಾರಿಯರನ್ನು ಗೌರವದಿಂದ ಕಾಣುವ ಸಮಾಜದ ಜನರು ಹೆಚ್ಚು ಪ್ರಬುದ್ಧರಾಗಿರುತ್ತಾರೆ ಎಂದರ್ಥ. ಹೆಣ್ಣು, ಹೊನ್ನು, ಮಣ್ಣು - ಇವು ಮೂರು ಪುರುಷನ ಪ್ರಧಾನ ಬಲಹೀನತೆಗಳು ಎಂಬುದು ಸರ್ವವಿದಿತ; ಇದರಲ್ಲಿ ಮೊದಲ ಸ್ಥಾನದಲ್ಲಿರುವ ಹೆಣ್ಣಿನ ಮೇಲಿನ ವ್ಯಾಮೋಹವನ್ನು ತ್ಯಜಿಸಿ ಅಥವಾ ಅಂಕೆಯಲ್ಲಿಟ್ಟುಕೊಂಡು ಅವಳನ್ನು ಗೌರವದಿಂದ ಕಾಣಲು ಸಾಧ್ಯವಾದರೆ ಅದರಿಂದ ಪುರುಷರಿಗೆ ಇತರ ಎರಡು ಬಲಹೀನತೆಗಳನ್ನೂ ಮೆಟ್ಟಿ ನಿಲ್ಲಲು ಸಾಧ್ಯವಾಗಬಹುದು ಎಂಬ ನಂಬಿಕೆ ಇರಬಹುದೇನೋ! ಒಟ್ಟಾರೆ ಇದರಲ್ಲಿ ದುಪ್ಪಟ್ಟು ಲಾಭ ಇದೆ - ಪುರುಷರೂ ನಾರಿಯರೂ ಇಬ್ಬರೂ ಜೊತೆಯಾಗಿ ಎಲ್ಲರ ಉನ್ನತಿಗಾಗಿ ದುಡಿಯಬಹುದು. ಇರಲಿ, ಈಗಾಗಲೇ ಅನೇಕರಿಗೆ ಗೊತ್ತಿರುವ ಈ ಹಳೆಯ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದು ನೀವು ಆಲೋಚಿಸುತ್ತಿದ್ದೀರಾ? ಇದು ಒಂದು ಪೀಠಿಕೆ ಮಾತ್ರ.

ಈ ಮೇಲಿನ ಸಂಕ್ಷಿಪ್ತ ಹಾಗೂ ಸರಳ ಸೂತ್ರದಂತೆಯೇ ಇನ್ನೊಂದು ಮೂಲಭೂತ ಸೂತ್ರ ನನ್ನ ಮನಸ್ಸಿನಲ್ಲಿದೆ, ಇದು ವೃತ್ತಿಯ ಆಧಾರದ ಮೇಲೆ ರಚಿಸಲ್ಪಟ್ಟದ್ದು.

"ಶಿಕ್ಷಕ, ರಕ್ಷಕ, ಸಂಶೋಧಕ - ಇವರಿಗಿದ್ದರೆ ಸಂತೃಪ್ತಿ, ದೇಶಕ್ಕೆ ಸುಖ-ಸಮೃದ್ಧಿ ಪ್ರಾಪ್ತಿ"

ತುಸು ವಿಶದವಾಗಿ ಹೇಳುವುದಾದರೆ ಈ ಮೂರೂ ವರ್ಗದ ಜನರಿಗೆ ಅತ್ಯುತ್ತಮ ಸಂಬಳವನ್ನು ಕೊಟ್ಟು ಗೌರವದಿಂದ ನಡೆಸಿಕೊಳ್ಳಬೇಕು, ಆಗ ತನ್ನಿಂದ ತಾನೇ ಎಲ್ಲಾ ಸರಿ ಹೋಗುತ್ತದೆ, ದೇಶವು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತದೆ.

ಈಗ ನೀವು ಕೇಳಬಹುದು - ಹಾಗಾದರೆ ಹೊಟ್ಟೆ ತುಂಬಿಸುವ ಕೃಷಿಕರ ಸ್ಥಾನ ಎಲ್ಲಿ? ಜೀವ ಉಳಿಸುವ ವೈದ್ಯರನ್ನು ಕಡೆಗಣಿಸಬೇಕೇ? ವಕೀಲರು, ಇಂಜಿನಿಯರುಗಳು, ಬ್ಯಾಂಕ್ ಉದ್ಯೋಗಸ್ಥರು, ವ್ಯಾಪಾರಸ್ಥರು, ವಿವಿಧ ಶ್ರಮ ದುಡಿಮೆಗಾರರು... - ಇವರಿಗೆಲ್ಲಾ ಏಕಿಲ್ಲ ಪ್ರಾಶಸ್ತ್ಯ? ಎಲ್ಲಾ ದೇಶವಾಸಿಗಳು ಸಮಾನರಲ್ಲವೇ? ಕೆಲಸದಲ್ಲಿ ಮೇಲು ಕೀಳು ಎಂಬ ಮಾತೇಕೆ? ಈ ರೀತಿಯ ವರ್ಗೀಕರಣ ಹೊಸ ವಿವಾದಗಳನ್ನು ಹುಟ್ಟು ಹಾಕುವುದಿಲ್ಲವೇ?

ಇಂತಹ ಪ್ರಶ್ನೆಗಳನ್ನು ಮನಸ್ಸಿಗೆ ಬರುವುದು ಸಹಜ. ಆದರೆ ದಯವಿಟ್ಟು ಗಮನಿಸಿ, ನಾನು ಇವರು ಮೇಲು, ಉಳಿದವರು ಕೀಳು ಎಂದೋ ಒಬ್ಬರು ಮುಖ್ಯ ಇನ್ನೊಬ್ಬರು ಅಮುಖ್ಯ ಎಂದೋ ಹೇಳಲಿಲ್ಲ. ಬದಲಾಗಿ ಇನ್ನಿತರರ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಲು ಸಾಧ್ಯವಿರುವಂತಹ ವೃತ್ತಿಗಳನ್ನು ಪರಿಗಣಿಸಿ ಇದನ್ನೊಂದು ಮೂಲಭೂತ ಸೂತ್ರವೆಂದು ನಿಮ್ಮ ಮುಂದಿಡುತ್ತಿದ್ದೇನೆ. ಈ ವೃತ್ತಿಗಳನ್ನು ಒಂದೊಂದೇ ಆಗಿ ಪರಿಗಣಿಸೋಣ, ಆಗ ನಿಮಗೆ ಇದರಲ್ಲಿ ಹೆಚ್ಚಿನ ಸ್ಪಷ್ಟತೆ ಗೋಚರವಾಗುತ್ತದೆ.

ಶಿಕ್ಷಕರು
-----------

ಉತ್ತಮ ಶಿಕ್ಷಣ ದೊರೆಯದಿದ್ದರೆ ಹೇಗೆ ಮುಂದಿನ ಜನಾಂಗ ಉತ್ತಮವಾಗಲು ಸಾಧ್ಯ? ಒಬ್ಬ ಉತ್ತಮ ಕೃಷಿಕನಾಗಬೇಕಾದರೆ, ಉತ್ತಮ ವೈದ್ಯನಾಗಬೇಕಾದರೆ ಯಾವುದಕ್ಕೂ ಶಿಕ್ಷಣ ಎಂಬುದೊಂದು ಬೇಕು ತಾನೇ? ದುರದೃಷ್ಟವಶಾತ್ ಇಂದು ಶಿಕ್ಷಕರನ್ನು ಅನೇಕ ರೀತಿಯಲ್ಲಿ ಅವಮಾನ ಮಾಡಲಾಗುತ್ತಿದೆ, ಅನೇಕ ವರ್ಗದ ಶಿಕ್ಷಕರಿಗೆ ಸರಿಯಾದ ಸಂಬಳ ಕೂಡ ಇರುವುದಿಲ್ಲ. ಉತ್ತಮ ಶಿಕ್ಷಕರನ್ನು ರತ್ನಗಂಬಳಿ ಹಾಕಿ ಸ್ವಾಗತಿಸಬೇಕಾದದ್ದು ಸಮಾಜದ ಕರ್ತವ್ಯ, ಆದರೆ ಇಂದು ಖಾಯಂ ಹುದ್ದೆ ಸಿಗಲು ಲಕ್ಷಗಟ್ಟಲೆ ಲಂಚ ಕೊಡಬೇಕು ಅಥವಾ ಅವರಿಗೆ ಜಾತಿ, ಶಿಫಾರಸ್ಸು ಹೀಗೆ ‘ಪ್ರಭಾವ’ ಬೀರುವ ತಾಕತ್ತು ಇರಬೇಕು. ಹಿಂದೆ ಈ ವೃತ್ತಿಗೆ ದುಡ್ಡು ಇರಲಿಲ್ಲವಾದರೂ ಮರ್ಯಾದೆ ಇತ್ತು, ಈಗ ಎರಡೂ ಇಲ್ಲವಾಗುತ್ತಿದೆ. ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕರನ್ನಂತೂ ಆ ಗಣತಿ, ಈ ಗಣತಿ, ಚುನಾವಣೆ ಹೀಗೆ ಅನೇಕ ವಿಷಯಗಳಲ್ಲಿ ವಿವೇಚನಾರಹಿತವಾಗಿ ಬಳಸುತ್ತೇವೆ. ಅರೆಕಾಲಿಕ ಶಿಕ್ಷಕರ ಕಥೆಯಂತೂ ಕೇಳಿದರೆ ಮನಸ್ಸು ಮುದುಡಿ ಹೋಗುತ್ತದೆ. ಹೀಗಿರುವಾಗಿ ಸ್ವಾಭಾವಿಕವಾಗಿ ಈ ವೃತ್ತಿಯನ್ನು ಆಯ್ದುಕೊಳ್ಳಲು ಹಿಂದೇಟು ಹಾಕುವವರ ಸಂಖ್ಯೆ ಕೂಡ ಅಧಿಕವಾಗಿರುತ್ತದೆ.

ಸಂಬಳ, ಮರ್ಯಾದೆ ಹೆಚ್ಚಾದರೆ ಉತ್ತಮ ಶಿಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತದೆ, ಮುಂದೆ ಮಕ್ಕಳು ಉತ್ತಮ ಪ್ರಜೆಗಳಾಗಿ ವಿವಿಧ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾ ದೇಶದ ಉನ್ನತಿಗೆ ಕಾರಣರಾಗುತ್ತಾರೆ.

ರಕ್ಷಕರು
-----------

ನಮ್ಮ ದೇಶದ ಇನ್ನೊಂದು ಅತಿ ದೊಡ್ಡ ದೌರ್ಭಾಗ್ಯವೆಂದರೆ ಜನರು ಪೋಲೀಸರಿಗೆ ಹೆದರುವುದು - ಲಂಚ, ದೌರ್ಜನ್ಯ ಕೆಲವು ಬಾರಿ ಇವರಿಂದಲೇ ನಡೆಯುತ್ತದೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ. ಅಂತೆಯೇ ಸೈನಿಕರು ಕೂಡ ಕೆಲವು ಕಡೆ ಜನಸಾಮಾನ್ಯರ ಮೇಲೆ ದೌರ್ಜನ್ಯವೆಸಗಿ ತಮ್ಮ ವೃತ್ತಿಗೂ ದೇಶಕ್ಕೂ ಮಸಿ ಬಳಿಯುತ್ತಾರೆ. ಖಂಡಿತವಾಗಿಯೂ ಈ ವೃತ್ತಿಯಲ್ಲಿರುವ ಎಲ್ಲರೂ ಹೀಗಿಲ್ಲ, ಆದರೆ ಮಾಡುವ ಕೆಲವರು ಜನರ ಮನಸ್ಸಿನಲ್ಲಿ ಅಪನಂಬಿಕೆ, ಹೆದರಿಕೆಗಳನ್ನು ಶಾಶ್ವತವಾಗಿ ಬಿತ್ತಿಬಿಡುತ್ತಾರೆ. ಇನ್ನು ಕೆಲವರು ಪ್ರಾಮಾಣಿಕರೂ, ಮೃದು ಮನಸ್ಸಿನವರೂ ಇದ್ದಾರೆ, ಆದರೆ ಒಟ್ಟಾರೆ ನೊಡಿದರೆ ನಿಜವಾದ ವೃತ್ತಿಪರರು ಎಷ್ಟು ಮಂದಿ ಇದ್ದಾರೆ ಈ ವಿಭಾಗದಲ್ಲಿ?

ಪುನಃ ಇಲ್ಲಿ ನಾವು ಗಮನಿಸಬೇಕಾದ ಅಂಶಗಳೆರಡು: ೧) ಸಂಬಳ, ಗೌರವದ ಕೊರತೆಯಿಂದ ಅನೇಕ ಉತ್ತಮರು ಈ ವೃತ್ತಿಗಳಿಗೆ ಇಳಿಯದೇ ಇರುವುದು. ೨) ಅನೇಕ ರೀತಿಯಲ್ಲಿ ಕಷ್ಟಪಡುವ ಇವರು ಕೆಲವೊಮ್ಮೆ ಕಲ್ಲುಹೃದಯದವರಾಗಿ ಕೆಟ್ಟ ಕೆಲಸಗಳನ್ನು ಮಾಡುವುದು. ಹೆಚ್ಚಿನ ಅಧಿಕಾರ, ಶಕ್ತಿ, ಆಯುಧ ಇತ್ಯಾದಿಗಳ ಬಲದಿಂದ ಇವರು ಕೆಲವೊಮ್ಮೆ ಹೆಚ್ಚು ಧೈರ್ಯದಿಂದ ದೌರ್ಜನ್ಯಗಳನ್ನೆಸಗುತ್ತಾರೆ ಹಾಗೂ ಇದರಿಂದ ಜನರು ಇವರಿಗೆ ಜಾಸ್ತಿ ಹೆದರುತ್ತಾರೆ.

ಈ ವರ್ಗದವರನ್ನು ಮೇಲೆತ್ತುವುದರಿಂದ ಅವರಿಗೂ ಸ್ವಾಭಿಮಾನ, ವೃತ್ತಿಗೌರವ ಮೂಡುತ್ತದೆ ಹಾಗೂ ಉತ್ತಮರು ಈ ವೃತ್ತಿಯ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ನಿಧಾನಕ್ಕೆ ಜನರಿಗೂ ಹೆದರಿಕೆ ಕಮ್ಮಿ ಆಗಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ತಪ್ಪು ಮಾಡಿದವರ ಆಮಿಷಗಳಿಗೆ ಬಗ್ಗದೆ, ಜನಸಾಮಾನ್ಯನಿಗೆ ನ್ಯಾಯ ದೊರಕಿಸಿಕೊಡಲು ರಕ್ಷಕರು ಹೆಚ್ಚು ಪ್ರಾಮಾಣಿಕತೆಯಿಂದ ದುಡಿಯುತ್ತಾರೆ. ಒಟ್ಟಾರೆ, ದೇಶ ಹಾಗೂ ಜನರು ಹೆಚ್ಚು ಸುರಕ್ಷಿತವಾಗಿರುತ್ತಾರೆ.

ಸಂಶೋಧಕರು/ವಿಜ್ಞಾನಿಗಳು
----------------------------------

ದೇಶದ ಉನ್ನತಿಯಲ್ಲಿ ಇವರ ಪಾತ್ರ ಕೂಡ ಅತಿದೊಡ್ಡದು. ಒಬ್ಬ ಬುದ್ಧಿವಂತನ ಕಥೆ ತೆಗೆದುಕೊಳ್ಳೋಣ. ಅವನಿಗೆ ಉತ್ತಮ ಶಿಕ್ಷಣ ದೊರೆಯಿತು, ಸರಿ. ದೇಶದಲ್ಲಿ ವಾಸಿಸಲು ಹೆದರಿಕೆಯೂ ಇಲ್ಲದಂತೆ ಉತ್ತಮ ರಕ್ಷಣೆಯೂ ಸಿಕ್ಕಿದು, ಅದೂ ಸರಿ. ಆದರೆ ಹೊಸ ಸಂಶೋಧನೆಗಳನ್ನು, ಆವಿಷ್ಕಾರಗಳನ್ನು ಮಾಡಲು ಸರಿಯಾದ ಅವಕಾಶ-ಸೌಲಭ್ಯಗಳಿಲ್ಲದಿದ್ದರೆ? ತನ್ನ ಸೀಮಿತವಾದ ಜೀವನ ಸವೆದು ಹೋಗುವುದನ್ನು ನೋಡುತ್ತಾ ಕೂರುವುದು ಅಂತಹವರಿಗೆ ಕಷ್ಟಸಾಧ್ಯ. ಅವರ ಜ್ಞಾನ, ಸಾಧಿಸಬೇಕೆಂಬ ತುಡಿತ ದೇಶ-ಗಡಿಗಳ ಸೀಮೆಯನ್ನು ಸುಲಭವಾಗಿ ಮೀರುತ್ತದೆ; ಪರದೇಶಗಳು ಉತ್ತಮ ಅವಕಾಶಗಳನ್ನು ಕೊಟ್ಟರೆ ಹೋಗಿಬಿಡುತ್ತಾರೆ. ಕಳೆದ ಅನೇಕ ದಶಕಗಳಲ್ಲಿ ನಮ್ಮ ದೇಶದಲ್ಲಿ ಹೊಸ ಆವಿಷ್ಕಾರಗಳು ಆಗಿರುವುದು ಬಹಳ ಕಮ್ಮಿ. ಕೊನೆಗೆ ನಾವು ಕಷ್ಟಪಟ್ಟು ಕೂಡಿಟ್ಟದ್ದನ್ನೆಲ್ಲಾ ಆ ಪರದೇಶಗಳಿಗೆ ಕೊಟ್ಟು ಹೊಸ ತಂತ್ರಜ್ಞಾನಗಳನ್ನೂ, ಉಪಕರಣಗಳನ್ನೂ ದುಬಾರಿ ಬೆಲೆಗೆ ಕೊಂಡುಕೊಳ್ಳುತ್ತೇವೆ. ಈ ಸಾಲದ ಹೊರೆ ನಮ್ಮನ್ನು ಇನ್ನೂ ಕೆಳಕ್ಕೆ ತಳ್ಳುತ್ತದೆ.

ನಮ್ಮ ದೇಶದ ಸಂಪತ್ತು ಉಳಿಸಲು, ಬೆಳೆಸಲು ತಾಕತ್ತು ಇರುವ ಈ ವರ್ಗದ ಜನರನ್ನು ಚೆನ್ನಾಗಿ ನೋಡಿಕೊಂಡರೆ ನಮ್ಮ ದೇಶದಲ್ಲಿಯೂ ಅನೇಕಾನೇಕ ಆವಿಷ್ಕಾರಗಳು ಆಗಬಹುದು, ಅದನ್ನು ನಾವೇ ಹೊರದೇಶಗಳಿಗೆ ಮಾರಿ ಅಪಾರ ಸಂಪತ್ತನ್ನೂ ಗಳಿಸಬಹುದು.

ಸಾರಾಂಶ
-------------
ಉತ್ತಮವಾದ ಮುಂದಿನ ಪೀಳಿಗೆಯನ್ನು ಹೊರತರುವ ಶಿಕ್ಷಕರು, ಸುರಕ್ಷೆಯನ್ನೂ ಶಾಂತಿಯನ್ನೂ ಕಾಪಾಡುವ ರಕ್ಷಕರು, ಹೊಸ ಆವಿಷ್ಕಾರಗಳ ಮೂಲಕ ದೇಶದ ಸಂಪತ್ತನ್ನು ಹೆಚ್ಚು ಮಾಡುವ ಸಂಶೋಧಕರು - ಈ ಮೂರು ವಿಭಾಗದ ಜನರನ್ನು ಹೆಚ್ಚು ಸಂಬಳ, ಗೌರವ ಕೊಟ್ಟು ಚೆನ್ನಾಗಿ ನೋಡಿಕೊಂಡರೆ ನಮ್ಮ ದೇಶದ ಅಭಿವೃದ್ಧಿ ತಾನಾಗಿಯೇ ಆಗುತ್ತದೆ ಎನ್ನುವುದು ನನ್ನ ಬಲವಾದ ವಿಶ್ವಾಸ.

ಕೊನೆಯದಾಗಿ ಈ ಕೆಳಗಿನ ಪ್ರಶ್ನೋತ್ತರಗಳನ್ನೂ ಓದಿ, ಇವು ನನ್ನ ಮಿತ್ರರೊಡನೆ ಈ ವಿಷಯಗಳನ್ನು ಚರ್ಚಿಸಿದಾಗ ಬಂದಂತಹ ಪ್ರಶ್ನೆಗಳು.

ಪ್ರಶ್ನೆ ೧: ‘ಏಳು ಕುಡಿಕೆ ಚಿನ್ನ’ದ ಕಥೆಯಲ್ಲಿ ಹೇಗೆ ದುಡ್ಡು ಯಾರಿಗೂ ತೃಪ್ತಿ ಕೊಡುವುದಿಲ್ಲ ಎಂಬುದನ್ನು ನಾವೆಲ್ಲರೂ ಓದಿದ್ದೇವೆ. ಆದರೆ ನೀವು ಇಲ್ಲಿ ಕೆಲವು ವರ್ಗದವರಿಗೆ ಹೆಚ್ಚು ಸಂಬಳ ಕೊಡುವ ಬಗ್ಗೆ, ಅದರ ಮೂಲಕ ಅವರು ತೃಪ್ತರಾಗಿ ದೇಶವನ್ನು ಮುಂದಕ್ಕೆ ಒಯ್ಯುವ ಬಗ್ಗೆ ಮಾತನಾಡುತ್ತಿದ್ದೀರಲ್ಲಾ? ಹೆಚ್ಚು ದುಡ್ಡು ಕೊಡುವ ಬದಲು ನಾವು ಒಳ್ಳೆಯ ಗುಣಗಳನ್ನು ಬೆಳೆಸುವ ಬಗ್ಗೆ ಗಮನ ಹರಿಸಿದರೆ ಒಳ್ಳೆಯದಲ್ಲವೇ?

ಉತ್ತರ ೧: ಹಣದ ವ್ಯಾಮೋಹ ಇಲ್ಲದೆ ಪ್ರಾಮಾಣಿಕತೆಯಿಂದ ದುಡಿಯುವ ಅನೇಕ ನಿಷ್ಠಾವಂತರೂ ಇದ್ದಾರೆ, ಆದರೆ ಅಂಥವರಲ್ಲಿ ‘ಮನೆಗೆ ಮಾರಿ, ಊರಿಗೆ ಉಪಕಾರಿ’ ಎಂಬವರೂ ಸಾಕಷ್ಟು ಇದ್ದಾರೆ. ಇರಲಿ, ಅಂಥವರ ಪರೋಪಕಾರ ಮನೋಭಾವದ ಬಗ್ಗೆ ಹೆಚ್ಚು ಚರ್ಚೆ ಬೇಡ, ಅದು ನಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ, ಆದರೆ ಅಂಥವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎಂಬುದು ನಾವು ಗಮನದಲ್ಲಿರಿಸಬೇಕಾದ ಸತ್ಯ. ಮಾತ್ರವಲ್ಲ, ಹೆಚ್ಚಿನ ಸಂಬಳ ಕೊಟ್ಟು ಉತ್ತಮ ಅಭ್ಯರ್ಥಿಗಳನ್ನು ಆಕರ್ಷಿಸುವುದು ಸಾಮಾನ್ಯವಾದ ನೀತಿ, ತಮ್ಮ ಅಗತ್ಯಗಳನ್ನೂ ಕನಸುಗಳನ್ನೂ ಖರೀದಿಸಲು ದುಡ್ಡು ಎಲ್ಲರಿಗೂ ಬೇಕು. ಕೊನೆಯದಾಗಿ, ನಾನು ಬರೀ ದುಡ್ಡಿನ ವಿಷಯ ಮಾತ್ರ ಹೇಳುತ್ತ ಇಲ್ಲ. ಗೌರವದ ಬಗ್ಗೆ ಕೂಡ ಮಾತನಾಡಿದ್ದೇನೆ, ಒಟ್ಟಾರೆ ಅವರ ಸಂತೃಪ್ತಿ ನನ್ನ ಸೂತ್ರದ ಗುರಿ.

ಪ್ರಶ್ನೆ ೨: ದೇಶವನ್ನು ಆಳುವವರು (ರಾಜಕಾರಣಿಗಳು) ಏಕೆ ಮುಖ್ಯ ಅಲ್ಲ? ಅವರಿಗೆ ದುರಾಶೆ ಇದ್ದರೆ ಎಲ್ಲವೂ ಅನರ್ಥವಾಗುತ್ತದೆ. ಅವರು ಕಾನೂನು, ನೀತಿಗಳನ್ನು ರೂಪಿಸುವವರು, ನೆನಪಿರಲಿ.

ಉತ್ತರ ೨: ನಿಜಕ್ಕೂ ಹೇಳುವುದಾದರೆ ಇವರ ಮೇಲೆ ಕೂಡ ವಿಶೇಷವಾದ ಒತ್ತು ಬೇಕು. ಆದರೆ ಈ ವರ್ಗದ ಜನರಿಗೆ ತೃಪ್ತಿ ಎಂಬುದೇ ಇಲ್ಲ ಎಂಬುದು ಇತ್ತೀಚೆಗೆ ಹೆಚ್ಚಾಗಿ ತೋರಿಬರುತ್ತಿದೆ. ಕನಸಿನಲ್ಲೂ ಊಹಿಸದ ದೊಡ್ಡ ಮೊತ್ತದ ಹಣವನ್ನು ಇವರು ಇಂದು ನುಂಗುತ್ತಿರುವುದನ್ನು ನೋಡಿದರೆ ಇವರನ್ನು ಸಂತೃಪ್ತಗೊಳಿಸುವಂತಹ ನೀತಿಗಳನ್ನು ರೂಪಿಸುವುದು ಅಸಾಧ್ಯವೇನೋ! ಆದರೆ, ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಈ ಸೂತ್ರದಲ್ಲಿ ಇವರನ್ನು ಕೂಡ ಸೇರಿಸುವ ಸಾಧ್ಯತೆಯನ್ನು ನಾನು ಅಲ್ಲಗಳೆಯುತ್ತಿಲ್ಲ. ಇದಲ್ಲದಿದ್ದರೆ, ಉತ್ತಮ ಶಿಕ್ಷಣದ ಮೂಲಕ ಹಾಗೂ ಉತ್ತಮ ರಕ್ಷಕರ ಬೆಂಬಲದೊಂದಿಗೆ ಉತ್ತಮರು ರಾಜಕಾರಣವನ್ನು ಪ್ರವೇಶಿಸಬಹುದು ಎಂಬ ಆಸೆ ಇಟ್ಟುಕೊಳ್ಳಬಹುದು ಎಂದು ನನಗೆ ಕಾಣುತ್ತದೆ.

ಪ್ರಶ್ನೆ ೩: ಬೇರೆ ವೃತ್ತಿಗಳಂತೆ ಸಂಶೋಧಕರನ್ನೂ ಏಕೆ ಬದಿಗಿಡಲಿಲ್ಲ? ಉತ್ತಮ ಶಿಕ್ಷಕರ ಮೂಲಕ ಉತ್ತಮ ಸಂಶೋಧಕರೂ ಹುಟ್ಟುತ್ತಾರೆ, ಅಲ್ಲವೇ? ಏಕೆ ಅವರಿಗೆ ಒತ್ತು?

ಉತ್ತರ ೩: ಇದು ತುರ್ತಾಗಿ ಆಗಬೇಕಾದ ಒಂದು ವಿಷಯ, ಈಗಾಗಲೇ ನಮ್ಮ ದೇಶದಲ್ಲಿ ಇರುವ ಅನೇಕ ಬುದ್ಧಿವಂತರನ್ನು ಉಳಿಸಿಕೊಳ್ಳಲು ಹಾಗೂ ಪರದೇಶದಲ್ಲಿ ನೆಲೆಸಿರುವವರನ್ನು ವಾಪಸ್ ಬರುವಂತೆ ಪ್ರೇರೇಪಿಸಲು ಇದು ಅತ್ಯಗತ್ಯ. ಹೀಗಾಗಿ ಇದಕ್ಕೆ ಒಂದು ವಿಶೇಷವಾದ ಒತ್ತು.

ಪ್ರಶ್ನೆ ೪: ಈ ವರ್ಗದವರಲ್ಲಿ ಸದ್ಯಕ್ಕೆ ಅನೇಕ ಅಯೋಗ್ಯರು ಕೂಡ ಇದ್ದಾರಲ್ಲಾ? ಅವರಿಗೆ ಹೆಚ್ಚಿನ ಸಂಬಳ ಕೊಡುವುದು ಅನುಚಿತವಲ್ಲವೇ?

ಉತ್ತರ ೪: ಇದು ಕೋಳಿ-ಮೊಟ್ಟೆಯ ಅಥವಾ ಮರ-ಬೀಜದ ಕಥೆಯಾಯಿತು. ಹೆಚ್ಚಿನ ಸಂಬಳ ಕೊಡದಿದ್ದರೆ ಉತ್ತಮರು, ಯೋಗ್ಯರು ಈ ವೃತ್ತಿಗಳ ಕಡೆಗೆ ಆಕರ್ಷಿತರಾಗುವುದಿಲ್ಲ, ಅಯೋಗ್ಯರು ತುಂಬಿದರೆ ಸಂಬಳ ಹೆಚ್ಚು ಮಾಡಲು ಮನಸ್ಸು ಬರುವುದಿಲ್ಲ. ಈ ಮುಗಿಯದ ಸರಪಳಿಯನ್ನು ಮುರಿಯಲು ಒಂದೇ ಮಾರ್ಗ - ಸಂಬಳ ಜಾಸ್ತಿ ಮಾಡುವುದು. ನಿಧಾನಕ್ಕೆ ಎಲ್ಲಾ ತಾನಾಗಿಯೇ ಸರಿ ಹೋಗುತ್ತದೆ.

ಪ್ರಶ್ನೆ ೫: ಸರಿ, ಹಾಗಾದರೆ ಈ ಸೂತ್ರದ ಅನುಷ್ಠಾನದ ಬಗ್ಗೆ ಮಾತ್ರ ನಾವು ಗಮನ ಹರಿಸಿದರೆ ಸಾಕೇ? ಇಂದಿನ ಜ್ವಲಂತ ಸಮಸ್ಯೆಗಳ ಕಥೆ ಏನು?

ಉತ್ತರ ೫: ಇದರ ಅನುಷ್ಠಾನ ಬಹಳ ಮುಖ್ಯ, ತಡ ಮಾಡಿದಷ್ಟೂ ಪ್ರಗತಿ ನಿಧಾನವಾಗುತ್ತದೆ. ಕೈಯಲ್ಲಿರುವ ಬೇರೆ ಸಹಸ್ರಾರು ಸಮಸ್ಯೆಗಳನ್ನು ಹಾಗೆಯೇ ಬಿಟ್ಟು ಕೈಚೆಲ್ಲಿ ಕುಳಿತುಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ, ಆದರೆ ಸಮಸ್ಯೆಗಳ ವಿರುದ್ಧ ದನಿ ಎತ್ತುವಾಗ, ಹೋರಾಡುವಾಗ ಆಧಾರಸ್ಥಂಭಗಳ ಬಗ್ಗೆ ವಿಶೇಷವಾದ ಗಮನ ಇರಲಿ ಎಂದಷ್ಟೇ ನಾನು ಹೇಳುತ್ತಿರುವುದು.

ಪ್ರಶ್ನೆ ೬: ನಿಮ್ಮ ಪ್ರಕಾರ ಈ ಸೂತ್ರದ ಮುಂದಿನ ಹೆಜ್ಜೆ ಏನು?

ಉತ್ತರ ೬: ನನ್ನ ಉದ್ದೇಶ ಒಂದು ಮೂಲಭೂತ ತತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಯಾರ ಹಿತ ದೇಶಕ್ಕೇ ಹಿತ ತರುವುದು ಎಂಬುದು ಜನಕ್ಕೆ ಮನದಟ್ಟಾಗಿ ನಿಧಾನಕ್ಕೆ ಬೇರೂರಿದರೆ ಆಗ ದೇಶೋದ್ಧಾರದ ಅನೇಕ ಆಲೋಚನೆಗಳಿಗೆ ಹೆಚ್ಚಿನ ಸ್ಪಷ್ಟತೆ ದೊರೆಯುತ್ತದೆ. ಎಲ್ಲಿ ದನಿ ಎತ್ತಬೇಕು, ಯಾರನ್ನು ಬೆಂಬಲಿಸಬೇಕು ಎಂಬಲ್ಲಿ ಹೆಚ್ಚು ಜವಾಬ್ದಾರಿಯುತವಾದ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ದೂರಗಾಮಿ ಪ್ರಯೋಜನಗಳನ್ನು ಗಮನದಲ್ಲಿಸಿರಿಕೊಂಡು ಈ ಮೂರೂ ವರ್ಗದ ಜನರ ಏಳ್ಗೆಯ ಬಗ್ಗೆ ನಿಮಗೆ ಹೆಚ್ಚಿನ ಕಾಳಜಿ ಇರಲಿ ಎಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅದರಲ್ಲಿಯೇ ನಮ್ಮೆಲ್ಲರ ಒಳಿತು, ಉತ್ತಮ ಭವಿಷ್ಯ ಅಡಗಿದೆ.

ನಿಮ್ಮ ಅಮೂಲ್ಯವಾದ ಕೆಲವು ನಿಮಿಷಗಳನ್ನು ಬದಿಗಿಟ್ಟು ಓದಿದ್ದಕ್ಕೆ ಧನ್ಯವಾದಗಳು. ನಿಮ್ಮ ಅನಿಸಿಕೆಗಳನ್ನು ಸಂಕೋಚವಿಲ್ಲದೆ ಹಂಚಿಕೊಳ್ಳಬೇಕಾಗಿ ವಿನಂತಿ.

ಇತಿ,
ಕೃಷ್ಣ ಶಾಸ್ತ್ರಿ.

7 comments:

Anonymous said...

Chennagide Shaastrigale...Shikshakaru pakshakaraagade, Rakshakau bhakshakaraagade, sanshodhakaru nishprayojakaragaddidare paristiti sudharisodu nija...

Anonymous said...

ಸೂತ್ರಗಳಿಗೆ ನಮ್ಮಲ್ಲಿ ಕೊರತೆಯಿಲ್ಲ; ಇರುವುದು ಅನುಷ್ಠಾನದ್ದು. ಸತ್ಯಂ ವಧಾ ಧರ್ಮಂ ಚೊರೆ ಎನ್ನುವವರ ವಿಪರೀತ ಕಾಲದಲ್ಲಿರುವ ನಾವು (ಪ್ರಾಮಾಣಿಕ ಕಾಳಜಿಯುಳ್ಳ ಶ್ರೀಸಾಮಾನ್ಯರು)ನಿಜ ಮೌಲ್ಯಗಳನ್ನು ಸ್ಪಷ್ಟಪಡಿಸಲು ಕನಿಷ್ಠ ನಮ್ಮ ನಮ್ಮ ಮಿತಿಯಲ್ಲಿ ಗಟ್ಟಿಯಾಗಬೇಕು. ಮೇಧಾ ಪಾಟ್ಕರ್ರೋ ಅಣ್ಣಾ ಹಜಾರೆಯೋ ತುಂಬಾ ದೊಡ್ಡ ಆದರ್ಶವಾಗಬಹುದು. ಕನಿಷ್ಥ ನಮ್ಮ ನಡುವೆಯೇ ಇರುವ ಗೆಳೆಯ ಸುಂದರರಾಯರ ಕೆಲಸಕ್ಕಾದರೂ ಬಲಕೊಡಬಹುದು. ವಿವರಗಳಿಗೆ ನೋಡಿ:
http://sundararao.blogspot.com/
ಅಶೋಕವರ್ಧನ

Shivakrishna said...

Khanditha olleya abhipraya........
Sahajavagi ellarallu "E desha Pragathi hondabahude??" emba nirasheya bhavane ide, khanditha namma desha abhivriddhi hondabahudu embudakke namma deshada ondu rajyavanne nodabahudu, Alli mula soukaryagala jothege makkala vidyabhyasa(visheshavagi hennu makkala) hagu "women health care" na mulaka No 1 state agide,
Hagagi olleya shikshakaru beku ennuva melina abhiprayakke innu hechhina othhu siguthhade

ಕೃಷ್ಣ ಶಾಸ್ತ್ರಿ - Krishna Shastry said...

ಪ್ರಿಯ ಅಶೋಕವರ್ಧನರೇ,

ನಿಮ್ಮ ಕಳಕಳಿಯ ಪ್ರತಿಕ್ರಿಯೆಗೆ ಧನ್ಯವಾದ. ಸುಂದರರಾಯರ ಬ್ಲಾಗ್ ಓದಿದ್ದೇನೆ, ಬಹಳ ಬೇಸರವಾಗಿದೆ. ಹೆಚ್ಚಿನ ಪ್ರತಿಕ್ರಿಯೆಯನ್ನು ಆ ಬ್ಲಾಗಿನಲ್ಲಿಯೇ ಹಾಕಿದ್ದೇನೆ.

ಅನುಷ್ಠಾನದ ಕೊರತೆ ಇದ್ದೇ ಇದೆ. ಆದರೆ ಅನೇಕ ಬಾರಿ ನಾವೆಲ್ಲಾ ಹೋರಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಕುಂದುಕೊರತೆಗಳ ವಿರುದ್ಧ (secondary effects). ಮೂಲಭೂತ ಸಮಸ್ಯೆ (Root Cause) ನಿವಾರಣೆ ಆಗದೆ ಈ ಎಲ್ಲಾ ಹೋರಾಟಗಳೂ ಕೇವಲ ತಾತ್ಕಾಲಿಕ ಗೆಲುವನ್ನು ತಂದುಕೊಡಬಲ್ಲುವು, ಅಷ್ಟೆ.

ಹಾಗೆಂದು ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ನಡೆಯುತ್ತಿರುವ ಹೋರಾಟವನ್ನು ನಿಲ್ಲಿಸಬೇಕೆಂದಲ್ಲ, ಖಂಡಿತಾ ಮುಂದುವರೆಸಬೇಕು, ನಾವೂ ಜಾಗೃತಗೊಂಡು ಇತರರನ್ನೂ ಹುರಿದುಂಬಿಸಬೇಕು. ಆದರೆ ಅದರೊಂದಿಗೇ ಈ ಮೂಲಭೂತ ಸೂತ್ರವನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ಅದರ ಪರವಾಗಿ ದನಿ ಎತ್ತಬೇಕು ಎನ್ನುವುದಷ್ಟೇ ನನ್ನ ಆಶಯ.

ನಾನು ಬರೆದಿರುವುದರಲ್ಲಿ ತೀರಾ ಹೊಸತೇನೂ ಇಲ್ಲ, ಆದರೆ ಇವು ಹತ್ತರೊಂದಿಗೆ ಹನ್ನೊಂದು ಎಂಬುದಾಗಿ ಪರಿಗಣಿಸಲ್ಪಟ್ಟು ಕಳೆದುಹೋಗುತ್ತದೆ. ಆದರೆ ಅದಲ್ಲ, ಬದಲಾಗಿ ಈ ಕ್ಷೇತ್ರಗಳು ಆಧಾರಸ್ಥಂಭಗಳು, ದೂರಗಾಮಿ ಪರಿಣಾಮ ಬೀರುವವು, ಇವನ್ನು ಮೇಲೆತ್ತದಿದ್ದರೆ ಬೇರೇನು ಮಾಡಿಯೂ ಉದ್ಧಾರ ಆಗುವುದಿಲ್ಲ ಎಂಬುದನ್ನು ಜನರ ಮನಸ್ಸಿನಲ್ಲಿ ಬೇರೂರಿಸುವ ಪ್ರಯತ್ನ ನಾನು ಮಾಡಿದೆ, ಅಷ್ಟೆ.

ಇತಿ,
ಕೃಷ್ಣ ಶಾಸ್ತ್ರಿ.

Anonymous said...

Krishna,
Shikshakara vishayaveno sari. Adare arakshakara vishayakke naanu oppuvudilla. they are now getting good salaries. brashtachara ondu reethi cancer idda haage. Kondashtu jaastine agodu. ivara aasege mithiye illa. Idakkella onde maddu. Dandam Dashagunam. Ivaregu eshte tappugalanna madidaru yava rajakarnigu, brashtacharigaigu sariyagi shikshe agilla. Majority of these people should get severe punishment. then only it will improve. Haage mundina jananga sariyagiralu shikshakaru sari irabeku. Dandane illadiddare Shikshakaru eshte buddhi helali, vidhyarthigalu hora banda koodale ee hale generation avru hosa generation avarige roga pasarisadiraru. Enanthiri?
Ranjan.

ಕೃಷ್ಣ ಶಾಸ್ತ್ರಿ - Krishna Shastry said...

ರಂಜನ್ ಅವರೇ,

ನಾನು ಓದಿದ/ಕೇಳಿದ ಮಟ್ಟಿಗೆ ಅನೇಕ ಸಾಮಾನ್ಯ ಪೋಲೀಸರಿಗೆ ಸಂಬಳ ಇನ್ನೂ ಕೂಡ ಸಾಕಷ್ಟು ಕಮ್ಮಿಯೇ. ಮಾತ್ರವಲ್ಲ ಅವರಿಗೆ ಕೊಡುವ ಮನೆಗಳು ಇತ್ಯಾದಿ ಸಾಕಷ್ಟು ಕೆಟ್ಟ ಸ್ಥಿತಿಯಲ್ಲಿರುತ್ತವೆ. ಒಟ್ಟಿನಲ್ಲಿ ಉದ್ಯೋಗ ಹೆಮ್ಮೆ ತರಬೇಕು, ನಿತ್ಯದ ಜಂಜಾಟಗಳಿಗೆ ದುಡ್ಡಿಲ್ಲ ಎಂದು ಹಪಹಪಿಸುವಂತಾಗಬಾರದು - ಅಷ್ಟು ಉತ್ತಮ ಸ್ಥಿತಿಯಲ್ಲಿಲ್ಲ ಪೋಲೀಸರು. ಮಾತ್ರವಲ್ಲ, ಈ ಯಾದಿಯಲ್ಲಿ ಸೈನಿಕರೂ, ಇತರ ಕಾವಲುಗಾರರೂ ಸೇರುತ್ತಾರೆ. ಕಾಶ್ಮೀರದಂಥಹ ಛಳಿ ಪ್ರದೇಶದಲ್ಲಿ ಸರಿಯಾದ ದಿರಿಸು, ಸಲಕರಣೆಗಳಿಲ್ಲದೆ ನಮ್ಮ ಸೈನಿಕರು ಎಷ್ಟು ಕಷ್ಟಪಡುತ್ತಾರೆ, ಯುದ್ಧಕ್ಕೆ ಹೋಗುವಾಗ ಅವರ ಜೀವಕ್ಕೆ ಎಷ್ಟು ಬೆಲೆ ಇದೆ ಇತ್ಯಾದಿ ನಾವು ಓದುತ್ತಿರುತ್ತೇವೆ, ಅಲ್ಲವೇ? ಇನ್ನು ಸಾಮಾನ್ಯ ಕಾವಲುಗಾರರಂತೂ ಜುಜುಬಿ ೨ ಸಾವಿರಕ್ಕೆಲ್ಲಾ ಕೆಲಸ ಮಾಡುವುದಿದೆ. ಒಟ್ಟಿನಲ್ಲಿ ರಕ್ಷಣೆ ಕೊಡುವವರಿಗೆ ಇನ್ನೂ ಉತ್ತಮ ಸವಲತ್ತು ಕೊಡಬೇಕು ಎನ್ನುವುದು ಈಗಲೂ ನನ್ನ ಅಭಿಮತ.

However, ಇವರಲ್ಲಿ ಕೆಲವರಿಗೆ ಈಗಾಗಲೇ ಸಂಬಳ ಉತ್ತಮ ಮಾಡಿದ್ದಾರೆ ಎಂದರೆ ಒಳ್ಳೆಯದೇ. ನನ್ನ ನಂಬಿಕೆಯ ಪ್ರಕಾರ ಅದು ನಿಧಾನಕ್ಕೆ ಅವರ ಕರ್ತವ್ಯನಿಷ್ಠೆಯನ್ನು ಹೆಚ್ಚು ಮಾಡುವುದು.

ದಂಡನೆ ಬೇಡ ಎಂದೇನೂ ನಾನು ಹೇಳುತ್ತಿಲ್ಲ. ಅವ್ಯವಸ್ಥೆ ಹಾಗೂ ಇತರ ಕೆಡುಕುಗಳ ವಿರುದ್ಧ ನಾವು ಹೋರಾಟವನ್ನು ಮುಂದುವರಿಸಲೇ ಬೇಕು, ಆದರೆ ಅದರೊಂದಿಗೆ ಈ ಆಧಾರಸ್ಥಂಭಗಳನ್ನು ಮರೆಯಬಾರದು, ಅಷ್ಟೆ. ನನ್ನ ಅಭಿಪ್ರಾಯದಲ್ಲಿ ಈ ಮೂರು ವಿಷಯಗಳನ್ನು ಮಾಡದೇ ಇದ್ದರೆ ಬೇರೆ ಇನ್ನೇನು ಮಾಡಿದರೂ ಸಂಪೂರ್ಣ ಪ್ರಯೋಜನ ದೊರೆಯುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಮೂಲಭೂತ ಸೂತ್ರ ದೇಶದ ಅಭಿವೃದ್ಧಿಗೆ necessary condition. ಕಾಲ ಉರುಳಿದಂತೆ sufficient condition ಕೂಡ ಆಗುತ್ತದೆ, ಯಾಕೆಂದರೆ ಇದಕ್ಕೆ ಉಳಿದೆಲ್ಲವನ್ನೂ ಸರಿದಾರಿಗೆ ತರುವ ಸಾಮರ್ಥ್ಯವಿದೆ.

gk prasad said...

I think one more thing is we should put deadline to justice system.. It cannot go for 20 years hanging around like a betal

Nice article shastry..I agree with all ur points

Post a Comment