About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, July 12, 2011

ಮಕ್ಕಳ ಶಿಕ್ಷಣ - ಸಂಶೋಧನಾತ್ಮಕ ಮನೋಭಾವ

ಕೆಲವು ವಾರಗಳ ಹಿಂದೆ ಒಂದು ವಾರ್ತಾಪತ್ರಿಕೆಯಲ್ಲಿ ಸುದ್ದಿಯೊಂದನ್ನು ನೋಡಿದೆ, ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಬಾಲಕರಿಬ್ಬರು (ಪ್ರಮೋದ್, ಭಾರ್ಗವ) ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದುದರ ಬಗ್ಗೆ. ಒಂದು ಖಾಸಗಿ ಕಂಪನಿ (ಇಂಟೆಲ್) ಹಾಗೂ ಭಾರತ ಸರಕಾರದ ಸಹಯೋಗದಲ್ಲಿ ನಡೆಸಲಾಗುವ ‘ಐರಿಸ್’ ಎಂಬ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಸಾಕಷ್ಟು ಸಾಧನೆ ಮಾಡಿದರು, ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯೂ ಸಿಕ್ಕಿತು. ಈ ಮಕ್ಕಳು ಖಂಡಿತವಾಗಿಯೂ ನಾವೆಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಅವರಿಗೆ ಶಹಬ್ಬಾಸ್‍ಗಿರಿ ಸಲ್ಲಿಸುವುದರೊಂದಿಗೇ ನನ್ನ ಗಮನ ಸೆಳೆದ ಇನ್ನೊಂದು ವಿಷಯ ಏನೆಂದರೆ ಆ ಶಾಲೆಯ ಶಿಕ್ಷಕ ಶ್ರೀಧರ ರೈ ಹಾಗೂ ಶಿಕ್ಷಕಿ ವಸಂತಿಯವರ ಬಗ್ಗೆ ಉದಯವಾಣಿ ಬರೆದ ಒಂದು ಸಾಲು - ‘ಈ ಮಕ್ಕಳಲ್ಲಿ ಸಂಶೋಧನೆಯ ಆಸಕ್ತಿಯನ್ನು ಪ್ರೇರೇಪಿಸಲು ಈ ಶಿಕ್ಷಕರು ನಾನಾ ಅವಕಾಶಗಳನ್ನು ಹಂಚಿಕೊಡುತ್ತಲೇ ಇರುತ್ತಾರೆ’ ಎಂದು. ಇದು ಸಾಮಾನ್ಯ ಮಾತಲ್ಲ, ಅತ್ಯಂತ ಪ್ರಶಂಸನೀಯವಾದ ಸಂಗತಿ. ಮಾತ್ರವಲ್ಲ, ಮಕ್ಕಳ ಈ ಸಾಧನೆಯ ಹಿಂದೆ ಹೆತ್ತವರೂ ಮಹತ್ತರ ಪಾತ್ರ ವಹಿಸಿರಬಹುದು ಎಂದು ನಾನು ನಂಬುತ್ತೇನೆ.

ಆ ದಿನ ಉದಯವಾಣಿಯಲ್ಲಿ ಆ ಸುದ್ದಿಯನ್ನು ಓದುತ್ತಿದ್ದಾಗ ನನ್ನ ಮನಸ್ಸು ನನ್ನ ಶಾಲಾದಿನಗಳತ್ತ ಓಡಿತು (೯೦ರ ದಶಕ). ಬಾಲ್ಯದ ಎರಡು ಘಟನೆಗಳನ್ನು ನಾನು ಆಗೊಮ್ಮೆ ಈಗೊಮ್ಮೆ ಮೆಲುಕು ಹಾಕುತ್ತಲಿರುತ್ತೇನೆ,  ಈಗ ನಿಮ್ಮ ಮುಂದೆ ಬಿಚ್ಚಿಡುವ ಮನಸ್ಸಾಯಿತು.

೧. ಮೆಚ್ಚಿನ ಗಣಿತ
ನನಗೆ ಬಾಲ್ಯದಲ್ಲಿ ಗಣಿತದಲ್ಲಿ ಅತೀವ ಆಸಕ್ತಿ ಇತ್ತು. ೬ನೇ ತರಗತಿಯಲ್ಲಿರುವಾಗ ನಾನು ಟೀಚರ್ ಇನ್ನೂ ತರಗತಿಯಲ್ಲಿ ಪಾಠ ಮಾಡದೇ ಇರುವ ಪುಟಗಳಿಗೆ ಹೋಗಿ, ನಾನೇ ಕಲಿತು ಅದರ ಅಭ್ಯಾಸ ಲೆಕ್ಕಗಳನ್ನೆಲ್ಲಾ ಮಾಡಲು ತೊಡಗಿದೆ. ಆದರೆ, ಮಾಡಿದ್ದು ಸರಿಯೋ ತಪ್ಪೋ ಎಂದು ತಿಳಿಯಬೇಕಿತ್ತಲ್ಲವೇ? ಹೀಗಾಗಿ ತರಗತಿಯ ಗಣಿತ ಟೀಚರ್ ಬಳಿ ಹೋಗಿ ತೋರಿಸಲಾರಂಭಿಸಿದೆ. ಅವರು ನನ್ನ ಪ್ರಯತ್ನಗಳಿಗೆ ತಣ್ಣೀರೆರೆಚದೆ ಪರಿಶೀಲಿಸಿ ವಾಪಸ್ ಕೊಡುತ್ತಿದ್ದರು.

ಹೀಗಿರಲೊಂದು ದಿನ ನಾನು ಎಂದಿನಂತೆ ಶಿಕ್ಷಕಿಯರು ಕೂತುಕೊಳ್ಳುವ ಕೊಠಡಿಗೆ ಹೋಗಿದ್ದೆ, ಆಗ ಅಲ್ಲಿ ಇನ್ನೊಬ್ಬರು ಟೀಚರ್ ಕೂಡ ಇದ್ದರು, ಅವರು ಆಗ ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರಿಗೆ ನಾನು ಮಾಡುವುದು ಏನೇನೂ ಇಷ್ಟ ಇರಲಿಲ್ಲ; ಅವರು ಗಣಿತದ ಟೀಚರಿಗೆ ಹೇಳಿದರು: "ನೀವು ಇದನ್ನೆಲ್ಲಾ ಪ್ರೋತ್ಸಾಹಿಸಬೇಡಿ, ಮೊದಲೇ ಎಲ್ಲಾ ಕಲಿತುಬಿಟ್ಟರೆ ಆಮೇಲೆ ಕ್ಲಾಸಿನಲ್ಲಿ ಗಲಾಟೆ ಮಾಡ್ತಾರೆ ಇಂತಹ ಹುಡುಗರು" ಎಂದು. ಗಣಿತದ ಟೀಚರಿಗೆ ಏನನ್ನಿಸಿತೋ ಏನೋ, ಅವರೂ "ಕ್ಲಾಸಿನಲ್ಲಿ ಪಾಠ ಮಾಡಿದ ಮೇಲೆ ಇದನ್ನು ಮಾಡಿದರೆ ಸಾಕು" ಎಂದು ನನ್ನನ್ನು ಸಾಗಹಾಕಿದರು.

ಇದರಿಂದ ನನ್ನ ಮುಗ್ಧ ಮನಸ್ಸಿಗೆ ಸಾಕಷ್ಟು ಘಾಸಿ ಆಯಿತು, ಆದರೆ ಮರುಮಾತನಾಡುವ ಸಂಪ್ರದಾಯ ಇಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಾನು ಅಸಹಾಯಕತೆ, ರೋಷದಿಂದ ಹಲ್ಲು ಕಚ್ಚಿಕೊಂಡು ವಾಪಾಸ್ ಬಂದೆ. ಮಾತ್ರವಲ್ಲ ದುರದೃಷ್ಟವಶಾತ್ ನನ್ನ ಆ ಪ್ರಯತ್ನಗಳೂ ಅಲ್ಲಿಗೇ ಕಮರಿಹೋದುವು.

ನನ್ನ ವಿರುದ್ಧ ಮಾತನಾಡಿದ ಟೀಚರಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೆ ಎನ್ನುವುದಕ್ಕೆ ಒಂದು ಕ್ಷುಲ್ಲಕ ಕಾರಣವೊಂದಿತ್ತು, ಅವರು ಕಲಿಸಿಕೊಟ್ಟದ್ದರಲ್ಲಿ ನಾನು ನನ್ನ ತಂದೆಯ ಸಹಾಯದಿಂದ ತಪ್ಪು ಕಂಡುಹುಡುಕಿ ತರಗತಿಯ ಮುಂದೆ ತೋರಿಸಿಕೊಟ್ಟದ್ದು. ಅದು ಬಹುಷಃ ಅವರ ಮನಸ್ಸಿನಲ್ಲಿ ನಾನೊಬ್ಬ ಅಹಂಕಾರಿ, ತಲೆಹರಟೆ ಎಂಬ ಭಾವನೆಯನ್ನು ಮೂಡಿಸಿರಬೇಕು. ಆದರೆ ಅದನ್ನು ಅವರು ವೈಯಕ್ತಿಕವಾಗಿ ಮನಸ್ಸಿಗೆ ಹಚ್ಚಿಕೊಂಡು ಈ ರೀತಿ ವರ್ತಿಸಿದ್ದು ಮಾತ್ರ ವಿಷಾದನೀಯ. ಕಲಿಕೆಯಲ್ಲಿ ಶಿಕ್ಷಕರೂ ಮಕ್ಕಳಿಂದ ಕಲಿಯುವುದು ಬಹಳವಿದೆ ಎಂಬುದನ್ನೂ ಅರ್ಥಮಾಡಿಕೊಳ್ಳುವ ವೈಶಾಲ್ಯತೆ ಇರಲಿಲ್ಲ ಅವರಲ್ಲಿ.

೨. ಲೈಬ್ರರಿಯ ಕಥೆ
ನಮ್ಮ ಶಾಲೆಯಲ್ಲಿ ಒಂದು ಸುವ್ಯವಸ್ಥಿತವಾದ ಲೈಬ್ರರಿ ಇರಲಿಲ್ಲ (ಬಹುಷಃ ಆ ಶಾಲೆಯಲ್ಲಿ ಈಗಲೂ ಇಲ್ಲ), ಆದರೂ ಒಂದೆರಡು ಕಪಾಟಿನಲ್ಲಿ ಒಂದಷ್ಟು ಪುಸ್ತಕಗಳಿದ್ದುವು. ಆ ಕೊಠಡಿಯಲ್ಲಿ ಒಬ್ಬ ಶಿಕ್ಷಕರು ಕೂರುತ್ತಿದ್ದರು. ಆದರೆ ಅವರು ಭಯಂಕರ ಹಾಗೂ ಅಕಾರಣ ಕೋಪಕ್ಕೆ ಹೆಸರುವಾಸಿಯಾಗಿದ್ದರು. ವೈಯಕ್ತಿಕವಾಗಿ ಅವರು ನಮ್ಮ ತರಗತಿಯಲ್ಲಿ ಪಾಠ ಮಾಡುತ್ತಲೂ ಇರಲಿಲ್ಲ, ಹಾಗಾಗಿ ಅವರ ಪರಿಚಯ ನಮಗಿರಲಿಲ್ಲ. ನನ್ನ ಪ್ರತಿಭಾವಂತ ಮಿತ್ರನೊಬ್ಬನಿಗೆ ಹಾಗೂ ನನಗೆ ಆ ಲೈಬ್ರರಿಯ ಮೇಲೆ ಒಂದು ಕಣ್ಣಿತ್ತು. ನಾವು ಬೆರಗುಗಣ್ಣುಗಳಿಂದ ಆಗಾಗ ಆ ಕಪಾಟುಗಳ ಕಡೆಗೆ ನೋಡುತ್ತಿದ್ದೆವು.

ಒಂದು ದಿನ ನನ್ನ ಮಿತ್ರ ಧೈರ್ಯ ಮಾಡಿ ಆ ಶಿಕ್ಷಕರ ಬಳಿ ಕೇಳಿಯೇ ಬಿಟ್ಟ "ನನಗೆ ಇಲ್ಲಿರುವ ಪುಸ್ತಕಗಳನ್ನು ನೋಡಬೇಕು" ಎಂದು. ಉತ್ತರ ಏನು ಬಂತು ಗೊತ್ತೇ? "ನಾವು ಎಲ್ಲಾ ನೋಡಿ ಇಟ್ಟಿದೇವೆ ಬಿಡು"!! ಮೊದಲೇ ದೂರ್ವಾಸ ಮುನಿ ಅವರು, ಅದಕ್ಕಿಂತ ಹೆಚ್ಚು ಮಾತನಾಡಲು ಅವನಿಗೂ ಧೈರ್ಯ ಬರಲಿಲ್ಲ, ತೆಪ್ಪಗೆ ವಾಪಸ್ ಬಂದ. ನಮ್ಮ ಹಕ್ಕು ಕಸಿದು ಹೋದ ಭಾವನೆ ಬಂದು ನನಗೆ ರಕ್ತ ಕುದಿಯಿತು, ಆದರೆ ಅಸಹಾಯಕತೆಯ ಅರಿವಿತ್ತು, ಹೀಗಾಗಿ ಸುಮ್ಮನೆ ಕುಳಿತೆ.

ಹೆತ್ತವರ ಪಾತ್ರ
-------------------

ಈ ಎರಡೂ ಸಂದರ್ಭಗಳಲ್ಲಿ ನಾನು ಮನೆಯಲ್ಲಿ ಬಂದು ಸಾಕಷ್ಟು ಹಾರಾಡಿದ್ದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಅದೊಂದು ಸಣ್ಣ ಪೇಟೆ - ನನ್ನ ತಂದೆ, ಆ ಶಿಕ್ಷಕರು ಇತ್ಯಾದಿ ಎಲ್ಲರೂ ಸಾಕಷ್ಟು ಗೌರವಾನ್ವಿತರು, ಮಕ್ಕಳು ಹೇಳಿದರು ಎಂದು ಅವರ ಬಳಿ ಹೋಗಿ ಚರ್ಚೆ ಮಾಡಲು ನನ್ನ ಹೆತ್ತವರಿಗೂ ಸಂಕೋಚವಿತ್ತು, ಸ್ವಲ್ಪ ಮಟ್ಟಿಗೆ ಅದನ್ನು ಅರ್ಥಮಾಡಿಕೊಳ್ಳಬಲ್ಲೆ. ಹೆತ್ತವರು ಮತ್ತು ಶಿಕ್ಷಕರ ಮಧ್ಯೆ ನಡೆಯುವ ಮೀಟಿಂಗ್‍ಗಳು ಎಷ್ಟರಮಟ್ಟಿಗೆ ನಡೆಯುತ್ತಿತ್ತು ಎನ್ನುವುದೂ ನನಗೆ ಈಗಲೂ ಸರಿಯಾಗಿ ಗೊತ್ತಿಲ್ಲ.

ನನ್ನ ಪ್ರಯತ್ನ
----------------

ಉತ್ತಮ ಅವಕಾಶಗಳು ಸಿಕ್ಕಿದ್ದಿದ್ದರೆ ನಾನೇನು ದೊಡ್ಡ ವಿಜ್ಞಾನಿ ಆಗುತ್ತಿದ್ದೆ ಎಂದು ಅಹಂಕಾರದಿಂದ ಕೊಚ್ಚಿಕೊಳ್ಳುತ್ತಾ ಇಲ್ಲ, ‘ಸಾಧನೆ’ಯ ದೃಷ್ಟಿಯಿಂದ ನೋಡಿದರೆ ನಾನೇ ಕೈಯಾರೆ ಕೈಚೆಲ್ಲಿಕೊಂಡ ಅವಕಾಶಗಳೂ ನನ್ನ ಮುಂದಿನ ಶೈಕ್ಷಣಿಕ ಜೀವನದಲ್ಲಿ ಕಂಡುಬಂದಿವೆ. ಕುಣಿಯಲಾರದವನಿಗೆ ಅಂಗಳ ಓರೆ ಎಂದೂ ಕೆಲವರು ಹೇಳಬಹುದು. ಹಾಗೆಂದು ನಾನೇನು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಪೋಲಿಯಾಗಿ ತಿರುಗಲಿಲ್ಲ, ನಾನು ಮುಂದೆಯೂ ತರಗತಿಯಲ್ಲಿ ಮೊದಲನೆಯವನಾಗಿ ಉತ್ತಮ ಮಾರ್ಕುಗಳನ್ನು ತೆಗೆದುಕೊಳ್ಳುತ್ತಾ ಹೈಸ್ಕೂಲ್ ಪಾಸ್ ಆದೆ, ಮುಂದುವರಿದು ಇಂಜಿನಿಯರ್ ಆಗಿ ಸಾಕಷ್ಟು ಉತ್ತಮ ಕೆಲಸಕ್ಕೂ ಸೇರಿದೆ. ಆದರೆ ‘ಆದರೆ...’ ಎಂಬ ಪ್ರಶ್ನೆ ಕಾಡುತ್ತಾ ಇರುತ್ತದೆ ಎನ್ನುವುದೂ ಸುಳ್ಳಲ್ಲ; ನನ್ನ ಶಾಲಾದಿನಗಳು ಹೇಗಿರಬೇಕಿತ್ತು ಎಂಬುದರ ಬಗ್ಗೆ ಕಲ್ಪನೆಗಳು ಮೂಡುತ್ತವೆ, ಮುಂದೆ ಈ ನಿಟ್ಟಿನಲ್ಲಿ ನಾನು ಮಾಡಬಹುದಾದ ಸೇವೆಗಳ ಬಗ್ಗೆ ಹೊಸ ಕನಸುಗಳೂ ಮೂಡುತ್ತವೆ.

ಕೆಲವರಿಗೆ ಮೇಲೆ ಹೇಳಿದ ವಿಷಯಗಳು ಬಹಳ ಸಣ್ಣದಾಗಿ ತೋರಬಹುದು, ಆದರೆ ಬಾಲ್ಯದ ಮುಗ್ಧ ಮನಸ್ಸಿಗೆ ಅಂತಹ ಸಣ್ಣ ವಿಷಯಗಳು ಎಷ್ಟು ಪ್ರಭಾವ ಬೀರಬಹುದು ಎಂಬುದು ನಾನು ಸ್ವಂತ ಅನುಭವಗಳ ಮೂಲಕ ಚೆನ್ನಾಗಿ ಅರಿತುಕೊಂಡ ವಿಷಯ. ಇಲ್ಲಿ ನಾವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಮ್ಮ ಮಧ್ಯೆ ಅದೆಷ್ಟೋ ಜನ ಪ್ರತಿಭಾವಂತರು ಇರುತ್ತಾರೆ, ಅವರ ವಿಕಸನಕ್ಕೆ ಉತ್ತಮ ಪರಿಸರವನ್ನು ಒದಗಿಸಿಕೊಟ್ಟರೆ ಅವರಿಂದ ಅದ್ಭುತವಾದ ಸಾಧನೆಗಳು ಹೊರಹೊಮ್ಮಬಹುದು, ಕಡೇಪಕ್ಷ ಅವರು ಎಷ್ಟೋ ಪಾಲು ಹೆಚ್ಚು ಬುದ್ಧಿವಂತರೂ, ಆತ್ಮವಿಶ್ವಾಸ ಉಳ್ಳವರೂ ಆಗಿ ಬೆಳೆಯಬಹುದು. ಅನೇಕ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿಗಳೂ ಕೂಡ ಸಂಕೋಚ ಬಿಟ್ಟು ಮುಂದೆ ಬಂದು ಉತ್ತಮ ಸ್ಥಿತಿಯನ್ನು ತಲುಪಬಹುದು.

ಇದರರ್ಥ ನನ್ನ ಶಾಲೆ ಬರೀ ಕೆಟ್ಟ ಹಾಗೂ ಸಂಕುಚಿತ ಮನೋಭಾವದ ಶಿಕ್ಷಕ-ಶಿಕ್ಷಕಿಯರಿಂದ ತುಂಬಿತ್ತು ಎಂದೇ? ಖಂಡಿತಾ ಅಲ್ಲ. ತಮ್ಮ ಅನೇಕ ವೈಯಕ್ತಿಕ ಕಷ್ಟಗಳನ್ನು ಬದಿಗಿಟ್ಟು ಅನೇಕ ಶಿಕ್ಷಕ, ಶಿಕ್ಷಕಿಯರು ತಮ್ಮ ಶಕ್ತಿ ಮೀರಿ ಚೆನ್ನಾಗಿ ಪಾಠ ಹೇಳಿಕೊಟ್ಟಿದ್ದಾರೆ, ಎನ್.ಸಿ.ಸಿ. ಹಾಗೂ ಸಂಸ್ಕೃತ ಯುವಜನೋತ್ಸವ ಇತ್ಯಾದಿಗಳಲ್ಲಿ ಸಾಧನೆ ಮಾಡಲು ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ, ತಮ್ಮ ಸದ್ವರ್ತನೆಗಳಿಂದ ನಮಗೆ ಸರಿಯಾದ ದಿಕ್ಕು ತೋರಿಸಿದ್ದಾರೆ, ಅವರಿಗೆಲ್ಲಾ ನಾನು ಚಿರಋಣಿ.

ಮಕ್ಕಳಲ್ಲಿ ಸಂಶೋಧನಾ ಮನೋಭಾವವನ್ನು ಮೂಡಿಸುವಲ್ಲಿ, ಅದನ್ನು ಪೋಷಿಸಿ ಬೆಳೆಸುವಲ್ಲಿ ಅನೇಕರದ್ದು ಪ್ರಮುಖ ಪಾತ್ರಗಳಿವೆ. ಶಿಕ್ಷಕರು ಹಾಗೂ ಹೆತ್ತವರು ಈ ಕೆಳಗಿನ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ನನ್ನ ಬಯಕೆ:
- ಸಂಶೋಧನಾ ಮನೋಭಾವವನ್ನು ಬೆಳೆಸುವುದು
- ಅವಕಾಶಗಳು ಸಿಗುವಂತೆ ನೋಡಿಕೊಳ್ಳುವುದು
- ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸುವುದು
- ಸಂಕೋಚ ಬಿಟ್ಟು ಪ್ರಶ್ನಿಸುವ ಮನೋಭಾವ ಬೆಳೆಸುವುದು
- ನಾಚಿಕೆ ಬಿಟ್ಟು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು
- ಸಾಧಿಸಿದಾಗ ಬೆನ್ನುತಟ್ಟುವುದು
- ಸಾಧಿಸದೇ ಇದ್ದಾಗ ತಾಳ್ಮೆಯಿಂದ ಇರುವುದು, ಇತರ ವಿಷಯಗಳಲ್ಲಿರುವ ಕೌಶಲ್ಯವನ್ನು ಕಂಡುಹುಡುಕುವುದು
- ಬರೀ ಅಂಕಗಳಷ್ಟೇ ಅಲ್ಲ ಇತರ ಅನೇಕ ಪೂರಕ ಜ್ಞಾನ, ಕೌಶಲ್ಯ, ಕಲೆಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಡುವುದು
- ಜೊತೆಯಾಗಿ ಚರ್ಚಿಸಿ ಮಕ್ಕಳ ವಿಕಸನಕ್ಕೆ ಪೂರಕವಾಗಿರುವ ವಾತಾವರಣ ಇರುವಂತೆ ನೋಡಿಕೊಳ್ಳುವುದು

ಇವೆಲ್ಲ ಈಗಾಗಲೇ ಹೇಳಿ-ಕೇಳಿ-ಬರೆದು ಹಳಸಲಾದ ಸಿದ್ಧಾಂತಗಳು, ಆದರೆ ಸುಲಭವಾಗಿ ಕಾರ್ಯರೂಪಕ್ಕೆ ಬರುವುದಿಲ್ಲ, ಅಷ್ಟೆ. ಇದಕ್ಕೆ ವಿರುದ್ಧವಾಗಿ ಇತ್ತೀಚೆಗಿನ ದಿನಗಳಲ್ಲಿ ಕೆಲವು ಖಾಸಗೀ ಶಾಲೆಗಳಲ್ಲಿರುವ ಅತಿಯಾದ ಕಲಿಕೆಯೂ ಮಕ್ಕಳ ಮೇಲೆ ಸಿಕ್ಕಾಪಟ್ಟೆ ಒತ್ತಡವನ್ನು ಹೇರುತ್ತವೆ. ಎರಡೂ ಬದಿಯಿಂದ ಆಲೋಚನೆ ಮಾಡಿ ಹೊಂದಿಸಿಕೊಂಡು ಸಮತೋಲನ ಕಾಯ್ದುಕೊಳ್ಳುವುದು, ವಿವಿಧ ರೀತಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದು ಸುಲಭದ ಸಂಗತಿಯೇನಲ್ಲ. ಆದರೂ ನನ್ನ ಬಾಲ್ಯದಲ್ಲಿ ನಡೆದಂತಹ ಸಂಕುಚಿತ ಮನೋಭಾವದ ಘಟನೆಗಳನ್ನು ಬದಿಗಿಡುವುದು ಅತಿ ಮುಖ್ಯ. ಹೆಚ್ಚು ಸಮಯ, ಹಣ ಖರ್ಚು ಮಾಡದೆ ಇರುವ ಸವಲತ್ತುಗಳನ್ನೇ ಪರಿಣಾಮಕಾರಿಯಾಗಿ ಬಳಸಿ ಒಂದೆರಡು ಪ್ರೋತ್ಸಾಹದ ಮಾತುಗಳನ್ನಾಡಿದರೂ ಸಾಕು; ತಾನು ಮಾಡುತ್ತಾ ಇರುವುದು ಸರಿ, ಅದು ಉತ್ತಮ ಕೆಲಸ ಎಂಬ ವಿಶ್ವಾಸ ಮೂಡಿದರೆ ಮಕ್ಕಳೇ ಹುಮ್ಮಸ್ಸಿನಿಂದ ಮುನ್ನಡೆಯುತ್ತಾರೆ, ಅನೇಕ ಸಾಧನೆಗಳನ್ನೂ ಮಾಡುತ್ತಾರೆ ಎಂಬುದು ನನ್ನ ಬಲವಾದ ವಿಶ್ವಾಸ.

ಈಗ ಕೆಲವು ರಾಜ್ಯಗಳಲ್ಲಿ ಶಿಕ್ಷಣ ನೀತಿಗಳು ಬದಲಾಗಿ ಒಂದಷ್ಟು ಕಡೆ ಬದಲಾವಣೆಯ ಗಾಳಿ ಬೀಸಿರುವುದು ಕೇಳಿಬರುತ್ತದೆ. ಇದು ಸಂತೋಷದ ವಿಷಯ. ಮಾತ್ರವಲ್ಲ, ಕೆಲವು ಕಡೆ ಉದ್ಯೋಗದಲ್ಲಿರುವವರು, ಕಂಪನಿಗಳು ಮಕ್ಕಳ ಶಿಕ್ಷಣದ ಕಡೆಗೆ ಆಸಕ್ತಿ ತೋರಿಸಿ ತಮ್ಮ ಕೈಲಾದ ಸಹಾಯ ಮಾಡಲು ಮುಂದೆ ಬರುವುದು ಗಮನಾರ್ಹ ಬದಲಾವಣೆ. ಹಳೇ ವಿದ್ಯಾರ್ಥಿಗಳು ಕೂಡ ತಾವು ಕಲಿತ ಶಾಲೆಯನ್ನು ಮೇಲೆತ್ತುವಲ್ಲಿ, ಮಕ್ಕಳಿಗೆ ಸಹಾಯ ಮಾಡುವಲ್ಲಿ ಪಾತ್ರ ವಹಿಸಿದರೆ ಉತ್ತಮ. ಈ ಎಲ್ಲಾ ಗುಣಾತ್ಮಕ ಬದಲಾವಣೆಗಳು ಹೀಗೆಯೇ ಮುಂದುವರೆದು ಬಾಲ್ಯದ ಶಿಕ್ಷಣ ಪ್ರತಿಯೊಬ್ಬರ ಜೀವನದ ಉನ್ನತಿಯ ದಿಕ್ಕಿನಲ್ಲಿ ಮಹತ್ತರವಾದ ಪಾತ್ರ ವಹಿಸಲಿ ಎಂದು ನಾನು ಆಶಿಸುತ್ತೇನೆ.

ನಿಮ್ಮ ಅಮೂಲ್ಯವಾದ ಕೆಲವು ನಿಮಿಷಗಳನ್ನು ಬದಿಗಿಟ್ಟು ಓದಿದ್ದಕ್ಕೆ ಧನ್ಯವಾದಗಳು. ಸಮಯ ಸಿಕ್ಕಿದಾಗ ನಿಮ್ಮ ಅನುಭವ, ಅಭಿಪ್ರಾಯಗಳನ್ನೂ ಹಂಚಿಕೊಳ್ಳಿ.

ಇತಿ,
ಕೃಷ್ಣ ಶಾಸ್ತ್ರಿ.

ವಿ.ಸೂ. ಲೇಖನವನ್ನು ಸವಿವರವಾಗಿ ಓದಿ ಕೆಲವು ಉತ್ತಮ ಸಲಹೆಗಳನ್ನು ಕೊಟ್ಟು ಸಹಕರಿಸಿದ ಬಾಲ್ಯದ ಗೆಳೆಯರಲ್ಲಿ ಒಬ್ಬನಾದ ಶ್ರೀಕೃಷ್ಣ ಭಟ್ಟನಿಗೆ ಧನ್ಯವಾದಗಳು.

5 comments:

Anonymous said...

Even i have faced some similar situations.. I feel things are improving, but in a very slow pace- Murali

ಅನುರಾಧಾ said...

ನೀವು ಹೇಳೋದು ಖಂಡಿತಾ ಸರಿ. ನಾನು ಶಾಲೆಯಲ್ಲಿರುವಾಗ ಇದ್ದ ಶಿಕ್ಷಕಿಯಿಂದ ನನಗೆ ಬಂದ ಭೌತಶಾಸ್ತ್ರದ ಆಸಕ್ತಿ ಇನ್ನೂ ನನ್ನಲ್ಲಿದೆ. ನಾನು ಈಗಲೂ ಸಮಯ ಕಳೆಯಲು “Quantum Physics” ಓದುತ್ತೇನೆ. ಇತ್ತೀಚೆಗೆ ಬಂದ “Horrible Science, Horrible Histories” ಪುಸ್ತಕಗಳು ಮಕ್ಕಳಿಗೆ ಶಾಲಾ ಪುಸ್ತಕಗಳಲ್ಲಿ ಇಲ್ಲದ/ ಇರುವ ವಿಷಯಗಳನ್ನು ಹಾಸ್ಯಮಯವಾಗಿ, ಕಥಾರೂಪದಲ್ಲಿ ತಿಳಿಸುತ್ತವೆ. ನನ್ನ ಮಗಳು ಇವುಗಳಿಂದ ಪ್ರಭಾವಿತಳಾಗಿ scientist/ linguist ಆಗುವ ನಿರ್ಧಾರಕ್ಕೆ ಬಂದಿರುವುದು ನನಗೂ ಸಂತೋಷ.

Anonymous said...

ಅಲುಮ್ನಿ ಜೊತೆ ಸಂಪರ್ಕ ಬೆಳೆಸುವ ಕಡೆಗೆ ನಮ್ಮ ಶಾಲೆಗಳು ಗಮನ ಹರಿಸಬೇಕು ಎಂದು ನನ್ನ ಅಭಿಪ್ರಾಯ. ಕಲಿತ ವಿದ್ಯೆಯನ್ನು ನೇರವಾಗಿ ಪ್ರಯೋಗಿಸುವ ಜನರೊಂದಿಗೆ ಸಂಮ್ಪರ್ಕ ಇಲ್ಲದಿದ್ದರೆ ಎಲ್ಲಾ ಸಂಸ್ಥೆಗಳೂ ಕಟ್ಟಿಟ್ಟ ನೀರಿನಂತ್ಹಾಗುತ್ತವೆ. ನಮ್ಮ 'elite' ಸಂಸ್ಥೆಗಳ ಅವಸ್ಥೆಯೂ ಇದೇ ರೀತಿ ಇದೆ.

ಶ್ರೀಕೃಷ್ಣ ಭಟ್ಟ

Ashwatha said...

ಶಾಸ್ತ್ರಿ,

ಬರೆದದ್ದು ಚೆನ್ನಾಗಿದೆ. ಪ್ರಾಥಮಿಕ ಶಾಲೆಯ ದಿನಗಳ ನನ್ನ ಅನುಭವ ಬಹಳ ಚೆನಾಗಿಯೇ ಇದೆ. ನಾನು ಓದಿದ್ದು ಮತ್ತೂರಿನ ಸರ್ಕಾರಿ ಶಾಲೆಯಲ್ಲಿ. ಅಂತಹ infrastructure ಅಂತ ಏನು ಇರದಿದ್ದರೂ ಸಹ ಬಹಳ ಆಸಕ್ತ ಮೇಷ್ಟರುಗಳಿದ್ದರು. ಶ್ರೀನಿವಾಸ ಮೂರ್ತಿ ಅಂತ ನಮ್ಮ ವಿಜ್ಞ್ಯಾನದ ಮೇಷ್ಟರು ಬೇರೆ ಬೇರೆ ಪ್ರಯೋಗಗಳನ್ನು ಮಾಡುವುದಕ್ಕೆ ಬಹಳ ಪ್ರೋತ್ಸಾಹಿಸಿದ್ದುಂಟು. ನಮ್ಮ ಇಂಗ್ಲಿಷ್ ಮೇಷ್ಟರಿಗೆ ಅಂತಹ ಇಂಗ್ಲಿಷ್ ಬರುತ್ತಿರಲಿಲ್ಲ, ಕೆಲವೊಮ್ಮೆ ಅವರ ಉಚ್ಚಾರಣೆಯನ್ನು ನಾನು ಕರೆಕ್ಟ್ ಮಾಡಿದ್ದುಂಟು, ಆದರೆ ತಪ್ಪು ತಿಳಿದುಕೊಲ್ಳುತ್ತಿರಲಿಲ್ಲ!

Rajendra Halemane said...

ನೂರಕ್ಕೆ ನೂರು ನೀವು ಹೇಳಿದ್ದು ಸರಿ. ಮಕ್ಕಳ ಬುದ್ದಿವ೦ತಿಗೆಗೆ ಪ್ರೋತ್ಸಾಹ, ಅವಕಾಶ ಕೊಟ್ಟಷ್ಟು, ಅವರ ಬೆಳವಣಿಗೆಗೆ ಸಹಕಾರಿ. ಅತ್ಯ೦ತ ಚುರುಕುಳ್ಳವರು, ಹೇಗೊ ಅವಕಾಶವನ್ನು ಹುಡುಕಿ ತಗೊಳ್ಳುತಾರೆ. ತೊ೦ದರೆಗೊಳಗಾಗುವವರು, ಸ್ವಲ್ಪ ಮಟ್ಟಿನ ಕೀಳರಿಮೆ ಉಳ್ಳವವರು. ಉಳಿದ೦ತೆ, ಶಿಕ್ಷಕ ರಕ್ಷಕರ ಪಾತ್ರವನ್ನವಲ೦ಬಿಸಿದೆ.
ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಶಿಕ್ಷಕರು ಮೊದಲೂ ಇದ್ದರು, ಈಗಲೂ ಇದ್ದಾರೆ. ಆದರೆ ಬೆರಳೆಣಿಕೆಯವರು! ಶಿಕ್ಷಕರಿಗೆ ಇದರ ಬಗ್ಗೆ, ರಜಾ ಕಾಲದಲ್ಲಿ, ಟ್ರೇನಿ೦ಗ್ ಕೊಡುವ ಏರ್ಪಾಡು ಮಾಡುವುದೊಳ್ಳೆಯದು (ಸ೦ಘ ಸ೦ಸ್ಥೆಗಳ ಮೂಲಕ).

Post a Comment