About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Monday, June 27, 2011

ಭಾರತೀಯ ರೈಲ್ವೇಯನ್ನು ಸ್ವಚ್ಚವಾಗಿರಿಸಿ, ನಿಮಗಾಗಿ ಮತ್ತು ಇತರರಿಗಾಗಿ

ವಿ.ಸೂ. ಈ ಲೇಖನ ವಿವಿಧ ಭಾಷೆಗಳಲ್ಲಿ ಲಭ್ಯವಿದೆ: ಪೂರ್ಣ ಪಟ್ಟಿ


ನೀವು ಇಂದು ಒಂದು ಸರಳ ಪ್ರತಿಜ್ಞೆಯನ್ನು ಮಾಡುವಿರಾ?

ಪ್ರಿಯ ಭಾರತೀಯರೇ ಹಾಗೂ ಹೊರಗಿನಿಂದ ಬಂದ ಅತಿಥಿಗಳೇ, ಭಾರತೀಯ ರೈಲ್ವೇಯ ಒಳಗೂ ಹೊರಗೂ ಸ್ವಚ್ಚತೆಯನ್ನು ಕಾಪಾಡಲು ಹಾಗೂ ಹೆಚ್ಚಿಸಲು ನಾನು ಕೈಲಾದ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.

ಮೊದಲನೆಯದಾಗಿ, ನೀವು ಖಾಸಗೀ ವಾಹನದ ಬದಲಾಗಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಆಯ್ದುಕೊಂಡದ್ದನ್ನು ನಾನು ಮನಸಾರೆ ಮೆಚ್ಚುತ್ತೇನೆ. ಈ ‘ಹಸಿರು’ ಆಯ್ಕೆಯ ಮೂಲಕ ಈಗಾಗಲೇ ನೀವು ಪರಿಸರ ಮಾಲಿನ್ಯವನ್ನೂ, ವಾಹನ ದಟ್ಟಣೆಯನ್ನೂ ಕಡಿಮೆ ಮಾಡುವಲ್ಲಿ ಪಾತ್ರ ವಹಿಸಿದ್ದೀರಿ. ಇಂತಹ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಇನ್ನೂ ಆಕರ್ಷಕವಾಗಿಸುವುದು ಹಾಗೂ ಜನರ ಮೊದಲ ಆಯ್ಕೆಯನ್ನಾಗಿಸುವುದು ನಮ್ಮೆಲ್ಲರಿಗೂ ಲಾಭದಾಯಕವಾದ ವಿಷಯ.



ಸಾರ್ವಜನಿಕ ಸಂಚಾರ ವ್ಯವಸ್ಥೆಗಳ ಮಧ್ಯೆ, ಅದರಲ್ಲಿಯೂ ದೂರಪ್ರಯಾಣದ ಮಟ್ಟಿಗೆ, ನಾನು ರೈಲಿಗಿಂತ ಯಾಕೆ ತುಟ್ಟಿಯಾದ ವಿಮಾನಯಾನದ ಕಡೆಗೆ ಹೆಚ್ಚು ಆಕರ್ಷಿತನಾಗುತ್ತೇನೆ? ನಿಜ, ಕಡಿಮೆ ಕಾಲಾವಧಿಯ ಪ್ರಯಾನ ಒಂದು ಮುಖ್ಯವಾದ ಅಂಶ. ಆದರೆ ಅನೇಕ ಬಾರಿ ನನ್ನ ಬಳಿ ಹಣ, ಸಮಯ ಎರಡೂ ಇದ್ದಾಗ ಕೂಡ ನಾನು ರೈಲಿನಲ್ಲಿ ಪ್ರಯಾಣ ಮಾಡಲು ಹಿಂಜರಿಯುತ್ತೇನೆ, ನೈರ್ಮಲ್ಯ-ಸ್ವಚ್ಚತೆಯ ಕೊರತೆಯ ಕಾರಣದಿಂದ. ಆಗಾಗ್ಗೆ ನಾನು ಚಿಂತಿಸುತ್ತಿರುತ್ತೇನೆ, ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳು ಹೇಗೆ ಹೆಚ್ಚು ಸ್ವಚ್ಚವಾಗಿರುತ್ತವೆ? ಜನರು ಮಾಡುವ ಗಲೀಜನ್ನು ಸದಾ ಗುಡಿಸಿ, ಒರೆಸಿ ಸ್ವಚ್ಚವಾಗಿಡುವ ಸಿಬ್ಬಂದಿಗಳು ಮಾತ್ರವಲ್ಲ ಇದರ ಹಿಂದಿರುವ ಶಕ್ತಿ, ಜನರು ಕೂಡ ನೈರ್ಮಲ್ಯದ ಬೆಲೆಯನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ.



ಇದೊಂದು ಸರಳ ಸಾರ್ವಜನಿಕ ವಿನಂತಿ, ನಿಮ್ಮ ಬೆಂಬಲದೊಂದಿಗೆ ಭಾರತೀಯ ರೈಲ್ವೇಯ ಸ್ವಚ್ಚತೆಯನ್ನು ಉಳಿಸಿ, ಹೆಚ್ಚಿಸಿ ನಮ್ಮೀ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಯೂ ಸ್ಮರಣೀಯವೂ ಆಗುವಂತೆ ಮಾಡುವ ಗುರಿಯೊಂದಿಗೆ. ನಿಜ, ಭಾರತೀಯ ರೈಲ್ವೇಯಲ್ಲಿ ವಿಮಾನ ನಿಲ್ದಾಣ ಅಥವಾ ವಿಮಾನಗಳಲ್ಲಿರುವ ಆಧುನಿಕ ಸೌಲಭ್ಯಗಳಿಲ್ಲ, ಆದರೆ ಇರುವುದನ್ನೇ ಒಗ್ಗಟ್ಟಿನಿಂದ ಹಾಗೂ ಜವಾಬ್ದಾರಿಯುತವಾಗಿ ಬಳಸಿ ನಾವು ಬಹುದೊಡ್ಡ ವ್ಯತ್ಯಾಸವನ್ನು ಕಾಣಬಹುದು. ದಯವಿಟ್ಟು ಮುಂದಕ್ಕೆ ಓದಿ.



೧. ಕಸವನ್ನು ಕಂಡಲ್ಲಿ ಎಸೆಯಬೇಡಿ, ರೈಲಿನ ಒಳಗೆ ಮಾತ್ರವಲ್ಲ, ಕಿಟಕಿಯ ಹೊರಗೂ ಎಸೆಯಬೇಡಿ.

ಅ) ಕಸವನ್ನು ಪೇಪರ್ ಅಥವಾ ಚೀಲಗಳಲ್ಲಿ ಸುತ್ತಿ, ಸಂಗ್ರಹಿಸಿ ಇಡಿ

ಆ) ಮುಂದೆ ಬರುವ ನಿಲ್ದಾಣದಲ್ಲಿ ಅಥವಾ ನೀವು ಕೊನೆಯದಾಗಿ ಇಳಿಯುವಲ್ಲಿ ಕಸದ ತೊಟ್ಟಿಯಲ್ಲಿ ಹಾಕಿ



೨. ಶೌಚಾಲಯವನ್ನು ನಿಮ್ಮದೇ ಎಂದು ಭಾವಿಸಿ ಉಪಯೋಗಿಸಿ! ನೀವು ಶೌಚಾಲಯವನ್ನು ಪ್ರವೇಶಿಸುವಾಗ ಅಲ್ಲಿರುವ ದುರ್ವಾಸನೆ ಅಥವಾ ಗಲೀಜನ್ನು ನೋಡಿ ನಿಮಗೆ ಅಸಹ್ಯ, ಕೋಪ ಬಂದರೆ ನಿಮ್ಮ ಮನಸ್ಥಿತಿ ನನಗೆ ಖಂಡಿತಾ ಅರ್ಥವಾಗುತ್ತದೆ, ಆದರೆ ದಯವಿಟ್ಟು ನೀವು ಕೂಡ ಅದೇ ಸ್ಥಿತಿಯಲ್ಲಿ ಬಿಟ್ಟು ಬರಬೇಡಿ. ವಿಶಾಲ ಮನಸ್ಕರಾಗಿ ಮುಂದಿನ ಸಹಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು, ಬೇಕಾದರೆ ಒಂದೆರಡು ನಿಮಿಷ ಹೆಚ್ಚೇ ತೆಗೆದುಕೊಂಡು ಹೊರ ಬರುವ ಮೊದಲು ಶೌಚಾಲಯವನ್ನು ಹೆಚ್ಚು ಸ್ವಚ್ಚ ಸ್ಥಿತಿಯಲ್ಲಿ ಬಿಟ್ಟು ಬರಲು ಪ್ರಯತ್ನಿಸಿ. ನೆನಪಿಡಿ, ಮುಂದೊಂದು ದಿನ ನೀವೇ ಆ ಉಳಿದವರ ಸಾಲಿನಲ್ಲಿರಬಹುದು, ನಿಮಗಿಂತ ಮೊದಲು ಹೋದವರಿಗೆ ಮನಸ್ಸಿನಲ್ಲೇ ಧನ್ಯವಾದಗಳನ್ನು ಅರ್ಪಿಸುತ್ತಾ!



೩. ಸಿಕ್ಕಸಿಕ್ಕಲ್ಲಿ ಉಗುಳಬೇಡಿ. ಪ್ಲಾಟ್ಫಾರಂ ಮೇಲೆ ಅಥವಾ ಜನರು ನಡೆದಾಡುವ ಇತರ ಯಾವುದೇ ಕಡೆ ಬೇಕಾಬಿಟ್ಟಿ ಉಗುಳಬೇಡಿ; ಕಿಟಕಿಯ ಹೊರಗೂ ಉಗುಳದಿದ್ದರೆ ಬಹಳ ಒಳ್ಳೆಯದು.

೪. ಸಹಪ್ರಯಾಣಿಕರನ್ನು ಪ್ರೇರೇಪಿಸಿ. ಯಾರಾದರೂ ರೈಲ್ವೇಯ ಅಥವಾ ಇನ್ಯಾವುದೇ ಸಾರ್ವಜನಿಕ ಸೊತ್ತನ್ನು ಹಾಳುಗೆಡವಲು ಯತ್ನಿಸಿದು ನಿಮಗೆ ಕಂಡುಬಂದರೆ ನೆನಪಿಡಿ, ಸಾರ್ವಜನಿಕ ಸೊತ್ತನ್ನು ಉಪಯೋಗಿಸುವುದು ಹೇಗೆ ನಿಮ್ಮ ಹಕ್ಕೋ ಹಾಗೆಯೇ ಅದನ್ನು ರಕ್ಷಿಸುವುದು ನಿಮ್ಮ ಕರ್ತವ್ಯ ಕೂಡ. ಜಗಳ ಬೇಡ, ತಿಳಿ ಹೇಳುವುದು ಉತ್ತಮ; ಸಾಧ್ಯವಿಲ್ಲ ಎಂದು ಕೈಚೆಲ್ಲುವ ಮುನ್ನ ತುಸುವಾದರೂ ಯತ್ನಿಸಿ.



೫. ಉತ್ಕೃಷ್ಠತೆಗಾಗಿ ಒತ್ತಾಯಿಸಿ. ನಿಮ್ಮ ಸಲಹೆ, ಸೂಚನೆಗಳನ್ನು ರೈಲ್ವೇಗೆ ಬರೆಯಲು ಒಂದೆರಡು ನಿಮಿಷ ಬದಿಗಿಡಿ; ನಿಮ್ಮ ಮನಸ್ಸಿನಲ್ಲಿ ಅನೇಕ ಅಮೂಲ್ಯವಾದ ಅಂಶಗಳಿವೆ ಎಂದು ನಾನು ಖಂಡಿತಾ ನಂಬುತ್ತೇನೆ. ನೀವು ಬರೆಯುವ ಪ್ರತಿ ಅಂಶ ಈಗಾಗಲೇ ಸಾರ್ವಜನಿಕ ದೂರು ಪಟ್ಟಿಯಲ್ಲಿದ್ದರೆ ಅದರ ಸ್ವರವನ್ನು ಬಲಪಡಿಸುತ್ತದೆ ಅಥವಾ ಹೊಸತೊಂದು ಅಂಶವನ್ನು ಹುಟ್ಟುಹಾಕುತ್ತದೆ. ವೈಯಕ್ತಿಕವಾಗಿ ನಾನು ಕೆಲವು ಈಮೈಲ್ಗಳನ್ನು ರೈಲ್ವೇಗೆ ಬರೆದಿದ್ದೇನೆ, ಅವುಗಳಲ್ಲಿ ಕೆಲವಕ್ಕೆ ಉತ್ತೇಜನಕಾರಿ ಪ್ರತಿಕ್ರಿಯೆಗಳೂ ಬಂದಿವೆ. ಪ್ರತಿ ಪ್ರಯಾಣದಲ್ಲಿಯೂ ಕಡೇಪಕ್ಷ ಒಂದು ಅಂಶವನ್ನು ಬರೆಯುವ ನಿರ್ಧಾರ ಮಾಡಿ, ತಾಳ್ಮೆಯಿಂದಿರಿ, ನಾವೆಲ್ಲರೂ ಸೇರಿ ವ್ಯವಸ್ಥೆಯಲ್ಲಿ ಖಂಡಿತಾ ಬದಲಾವಣೆಯನ್ನು ತರಬಹುದು.



೬. ಈ ಮಾತುಗಳನ್ನು ಪಸರಿಸಿ. ಸಾಧ್ಯವಾದೆಡೆ, ಇತರರನ್ನು ಜಾಗೃತಗೊಳಿಸಿ. ಇದರ ಪ್ರತಿಗಳನ್ನು ತೆಗೆದು ಹಂಚಲು ಏನೂ ಸಂಕೋಚಪಡಬೇಡಿ.

ಅ) ಇದರ ಇತ್ತೀಚೆಗಿನ ಆವೃತ್ತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ ಹಂಚಬೇಕೆಂದಿದ್ದರೆ, ಈ ಅಂತರ್ಜಾಲ ತಾಣವನ್ನು ಸಂದರ್ಶಿಸಿರಿ http://krishnashastry.blogspot.com

ಆ) ಸದ್ಯಕ್ಕೆ ಇದು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಲಭ್ಯವಿದೆ.

ಇ) ಇದನ್ನು ನಿಮ್ಮದೇ ಇತರ ಭಾಷೆಗಳಿಗೆ ಭಾಷಾಂತರಿಸಿ ನನ್ನ ಅಂತರ್ಜಾಲ ತಾಣದಲ್ಲಿ (ನೇರವಾಗಿ ಅಥವಾ ನಿಮ್ಮ ತಾಣದ ಕೊಂಡಿಯ ಮೂಲಕ) ಹಾಕುವಲ್ಲಿ ಆಸಕ್ತಿ ಇದ್ದರೆ, ದಯವಿಟ್ಟು ನನ್ನನ್ನು ಸಂಪರ್ಕಿಸಿ.



೭. ಈ ಆಲೋಚನೆಗಳನ್ನು ರೈಲ್ವೇಗೆ ಮಾತ್ರ ಸೀಮಿತವಾಗಿರಿಸಬೇಡಿ. ಸಾಧ್ಯವಾದಲ್ಲೆಲ್ಲಾ ನೈರ್ಮಲ್ಯ-ಸ್ವಚ್ಚತೆಯನ್ನು ಎತ್ತಿಹಿಡಿದು ನಮ್ಮ ದೇಶ ‘ಅದ್ಭುತ ಭಾರತ’ವಾಗಲಿ ಎಂಬ ಗುರಿಯತ್ತ ಮುನ್ನಡೆಯೋಣ.



೮. ಕೊನೆಯದಾಗಿ ಒಂದು ಮಾತು: ಈ ಜಾಗೃತಿಯನ್ನು ಹರಡುವ ಪ್ರಯತ್ನದಲ್ಲಿ ಕಾಗದವನ್ನು ಉಪಯೋಗಿಸಿದ್ದಕ್ಕೆ ನನಗೆ ಬೇಸರವಿದೆ, ಆದರೆ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೂಲಕ ಹೆಚ್ಚಿನ ಹಸಿರು ಗುರಿಯನ್ನು ಸಾಧಿಸಲು ಸಾಧ್ಯ ಎಂದು ನಂಬಿದ್ದೇನೆ.



ಈ ಸಾರ್ವಜನಿಕ ವಿನಂತಿಯ ಬಗ್ಗೆ ಏನಾದರೂ ಸಲಹೆ, ಸೂಚನೆಗಳಿದ್ದರೆ ನಿಸ್ಸಂಕೋಚವಾಗಿ ಈ ಅಂತರ್ಜಾಲ ವಿಳಾಸಕ್ಕೆ ಪತ್ರಿಸಿರಿ krishna.shastry@gmail.com



ನಿಮ್ಮ ಪ್ರಯಾಣ ಸುರಕ್ಷಿತ ಹಾಗೂ ಆಹ್ಲಾದಕರವಾಗಿರಲಿ ಎಂದು ಹಾರೈಸುವೆ

*** *** *** ***

0 comments:

Post a Comment