೦೭-ಮಾರ್ಚ್-೨೦೦೨,
ಬೆಂಗಳೂರು.
ಬಹುಮತ
-------------------
ವಿಜೃಂಭಿಸುತ್ತಿದ್ದಾರೆ ಧರ್ಮಾಂಧರು ಮುಗ್ಧರ ಕಡಿದು ಕೊಂದು,
ಬಳಲಿ ಹೋಗಿದೆ ಎಲ್ಲರ ಮನಸ್ಸೂ ಇದರಿಂದ ನೊಂದು.
ಹರಿಯುವಾಗಲೆಲ್ಲಾ ರಕ್ತದ ಒಂದೊಂದು ಬಿಂದು,
ವ್ಯಾಕುಲ ಚಿತ್ತವು ಪ್ರಶ್ನಿಸುತ್ತದೆ “ಇದಕ್ಕೆ ಕೊನೆ ಎಂದು?”
ನಿಜವಾಗಿ ಮನುಷ್ಯನಿಗೆ ಬೇಕಾಗಿರುವುದು ಸುಖ-ಶಾಂತಿ,
ಅದಕ್ಕೊಂದು ಮಾರ್ಗವಾಗಿ ಬಂತು ಧರ್ಮದ ಕ್ರಾಂತಿ.
ಆದರೆ ಮಂಕಾಯಿತು ಎಲ್ಲ ಧರ್ಮಗಳ ಮೂಲ ಕಾಂತಿ,
ಧರ್ಮದ ಹೆಸರಿನಲ್ಲಿ ಹಿಡಿಸುತ್ತಿದ್ದಾರೆ ಇಂದು ಎಲ್ಲರಿಗೂ ಭ್ರಾಂತಿ.
ಮರೆತುಬಿಟ್ಟಿದ್ದಾರೆ ಧರ್ಮಗಳ ಮೂಲ ಸಂದೇಶ,
ಹುಡುಕುತ್ತಾ ಇದ್ದಾರೆ ಜಗಳವಾಡಲು ಒಂದು ಅವಕಾಶ.
ಹರಡುತ್ತಿದ್ದಾರೆ ಎಲ್ಲೆಡೆಯೂ ಕಷ್ಟ - ಕ್ಲೇಶ,
ಮನಗಳಲ್ಲಿ ತುಂಬಿಸುತ್ತಿದ್ದಾರೆ ಜಾತಿಯ ವಿಷ.
ಈ ಅನಿಷ್ಟಗಳನ್ನು ತೊಲಗಿಸಲು ಬರಬೇಕು ಯುವಜನಾಂಗವು ಮುಂದು,
ಪ್ರೀತಿ-ಸಾಮರಸ್ಯದಿಂದ ಬಾಳಬೇಕು ಮುಸ್ಲಿಮ್ ಮತ್ತು ಹಿಂದು.
ನಿಜ, ತಪ್ಪುಗಳು ನಡೆದಿವೆ ಎರಡೂ ಕಡೆಯಿಂದ ಅಂದು,
ಮರೆತುಬಿಟ್ಟು ಹೊಸ ಬಾಳ್ವೆಯನ್ನು ಶುರುಮಾಡೋಣ ಇಂದು.
ಉಳಿಸೋಣ ನಮ್ಮ ಉನ್ನತ ಸಂಸ್ಕೃತಿಯ ಅವಶೇಷ
ಆಗ ನಿಜವಾಗಿಯೂ ಮೇಲೆ ಬರುವುದು ನಮ್ಮ ಭಾರತ ದೇಶ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment